
ಸರ್ಕಾರಿ ಶಾಲಾ ಕಾಲೇಜುಗಳ ಉಳಿವಿಗಾಗಿ ಕೈ ಜೋಡಿಸಿ: ಸೋಮಶೇಖರ್
ಪಿರಿಯಾಪಟ್ಟಣ : ಸರ್ಕಾರಿ ಶಾಲಾ ಕಾಲೇಜುಗಳ ಉಳಿವಿಗಾಗಿ ಕೈ ಜೋಡಿಸಿ ಎಂದು ಬೆಟ್ಟದಪುರ ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್ ತಿಳಿಸಿದರು
ತಾಲ್ಲೂಕಿನ ಬೆಟ್ಟದಪುರ ಸರ್ಕಾರಿ ಐಟಿಐ ಕಾಲೇಜಿನಲ್ಲಿ ನಡೆದ ವನ ಮಹೋತ್ಸವ, ಶಾರದ ಪೂಜೆ, ಪೋಷಕರ ಸಭೆ ಹಾಗೂ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬೆಟ್ಟದಪುರ ಸರ್ಕಾರಿ ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮವಾಗಿ ತರಬೇತಿ ನೀಡುವುದರ ಜೊತೆಗೆ ಬೆಂಗಳೂರು ಮೈಸೂರು ಕಡೆಗಳಲ್ಲಿ ಉದ್ಯೋಗ ಕೊಡಿಸುವ ಮೂಲಕ 100% ಫಲಿತಾಂಶ ಪಡೆಯುತ್ತಿದೆ, ಕಾಲೇಜಿಗೆ ಈಗಾಗಲೇ ಐದು ಕೋರ್ಸ್ ಗಳಿದ್ದು ಇನ್ನೂ ಹೆಚ್ಚಿನ ಕೋರ್ಸ್ ಗಳನ್ನು ತೆರೆಯಲು ಕೆಲವು ಕೊಠಡಿಗಳು ಹಾಗೂ ಮೂಲಭೂತ ಸೌಕರ್ಯಗಳು ಅವಶ್ಯಕತೆ ಇರುತ್ತದೆ, ಆದ್ದರಿಂದ ತಾಲೂಕಿನ ಸಮಾಜ ಸೇವಕರು, ರಾಜಕೀಯ ಪ್ರತಿನಿಧಿಗಳು ಮತ್ತು ಸಿಎಸ್ಆರ್ ಅಡಿಯಲಿ ಉದ್ಯಮದಾರರು ನಮ್ಮ ಕಾಲೇಜಿನ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಬೆಟ್ಟದಪುರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ನಟರಾಜ್ ಅವರು ಮಾತನಾಡಿ ಐಟಿಐ ವಿದ್ಯಾರ್ಥಿಗಳಿಗೆ ಮುಂದಿನ 10 ವರ್ಷದಲ್ಲಿ ಉತ್ತಮ ಭವಿಷ್ಯವಿದ್ದು ಯಾವುದೇ ಡಾಕ್ಟರ್ ಇಂಜಿನಿಯರ್ ಗಳಿಗಿಂತ ಉನ್ನತ ಸ್ಥಾನವನ್ನು ತಲುಪುತ್ತೀರಿ ಆದರೆ ನೀವು ಯಾವುದೇ ಕೆಲಸ ಮಾಡಿದರು ಶ್ರದ್ಧೆ ಭಕ್ತಿಯಿಂದ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ವಲಯಾಧಿಕಾರಿ ಮಧುಸೂದನ್ ಬಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಕಾರ್ಯದರ್ಶಿ ಪಾಂಡು, ಬೆಟ್ಟದಪುರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಟರಾಜ್ ಬಿಆರ್, ಬೆಟ್ಟದತುಂಗ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ರಾಮಚಂದ್ರ, ಚಾಣಕ್ಯ ಎಜುಕೇಶನ್ ಟ್ರಸ್ಟ್ ಮುಖ್ಯ ಶಿಕ್ಷಕ ತಿಮ್ಮಯ್ಯ, ಸುರೇಶ್, ನಾಗರಾಜ್, ಮೂಕನಹಳ್ಳಿ ಮಹದೇವ್, ಸೇರಿದಂತೆ ಬೆಟ್ಟದಪುರ ಕೈಗಾರಿಕಾ ತರಬೇತಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಸೇರಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು