
ಪಿರಿಯಾಪಟ್ಟಣ : ರಾಗಿ ಖರೀದಿ ಮಾಡಿದ ಹಣವನು ಶೀಘ್ರ ಬಿಡುಗಡೆಗೊಳಿಸಬೇಕು ಹಾಗೂ ತಾಲೋಕನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಛೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪ್ರತಿಭಟನೆ ಮಾಡಿ ತಹಶೀಲ್ದಾರ್ ನಿಸರ್ಗ ಪ್ರಿಯರವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಸರ್ಕಾರ ರೈತರಿಂದ ರಾಗಿ ಖರೀದಿ ಮಾಡಿ 5 ತಿಂಗಳು ಕಳೆದರು ಸರ್ಕಾರ ರೈತರಿಗೆ ಹಣ ಪಾವತಿಸದೇ ರೈತರು ಕಂಗಾಲಾಗಿದ್ದಾರೆ. ಖರೀದಿ ಕೇಂದ್ರಗಳ ಮೂಲಕ ಬೆಂಬಲ ಬೆಲೆಯಿಂದ ರೈತರಿಗೆ ಉಪಯೋಗವಾಗುತ್ತಿದ್ದರೂ ಕೂಡ ಸಕಾಲದಲ್ಲಿ ಖರೀದಿ ಕೇಂದ್ರ ತೆರೆಯದೆ ಮತ್ತು ರೈತರಿಗೆ ಹಣ ಕೊಡದೆ ವಿಳಂಬ ಮಾಡುತ್ತಿರುವ ನೀತಿಯಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಷ್ಟೆಲ್ಲಾ ಆದರೂ ಕೂಡ ಜಿಲ್ಲೆಯಲ್ಲಿ ಇನ್ನೂ ಶೇಕಡಾ 50 ರಷ್ಟು ಹಣ ಬಿಡುಗಡೆಯಾಗಿರುವುದಿಲ್ಲ. ಸರ್ಕಾರವು ತಕ್ಷಣದಲ್ಲಿ ಜಿಲ್ಲೆಯ ರಾಗಿ ಖರೀದಿ ಕೇಂದ್ರಗಳಿಂದ ರಾಗಿ ಖರೀದಿ ಮಾಡಿರುವ ಹಣವನ್ನು ರೈತರಿಗೆ ತಕ್ಷಣವೇ ಬಿಡುಗಡೆ ಮಾಡಬೇಕು. ಹಣ ಬಿಡುಗಡೆ ಮಾಡದಿದ್ದಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದರು.
ತಾಲ್ಲೂಕು ಅಧ್ಯಕ್ಷ ಕೊಣಸೂರು ಆನಂದ್ ಮಾತನಾಡಿ ಸರ್ಕಾರ ರೈತರ ಹಿತ ಕಾಯುವುದನ್ನು ಮರೆಯುತ್ತಿದೆ. ರೈತರಿಗೆ ತಲುಪಬೇಕಾದ ನ್ಯಾಯಯುತ ಬೆಲೆಗಳನ್ನು ಕೂಡ ಒತ್ತಾಯಪೂರ್ವಕವಾಗಿ ಪಡೆಯುವ ಅನಿವಾರ್ಯತೆ ಒದಗಿದೆ ಇದು ನೋವಿನ ಸಂಗತಿಯಾಗಿದೆ. ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಯಾವುದೇ ಕೆರೆ ಕಟ್ಟೆಗಳಲ್ಲಿ ನೀರು ಇಲ್ಲದಾಗಿದೆ. ಮಳೆಯನ್ನೆ ನಂಬಿ ಬೇಸಾಯ ಮಾಡುವ ರೈತರು ಬೆಳೆಗಳನ್ನು ಬೆಳೆಯಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಈ ಕೂಡಲೇ ಪಿರಿಯಾಪಟ್ಟಣ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಸಂಸ ರಾಜ್ಯ ಸದಸ್ಯ ಚಾಮರಾಯನ ಕೋಟೆ ಜಗದೀಶ್, ರೈತ ಸಂಘ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ರಾಜೇ ಅರಸ್, ಪ್ರಧಾನ ಕಾರ್ಯಧರ್ಶಿ ರಘುಪತಿ ಕೆ ಜಿ ,ಕಾರ್ಯಧ್ಯಕ್ಷ ಗುರುರಾಜ್, ಕುಮಾರ್, ಹುಣಸೂರು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಸೇರಿದಂತೆ ಇತರರು ಇದ್ದರು