
ಮೈಸೂರು; ರಾಜ್ಯದ ನೂರಕ್ಕೂ ಹೆಚ್ಚು ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಣೆಯಾಗಿರುವ ಕಾರಣ ರೈತರ ರಕ್ಷಣೆಗಾಗಿ ಬೆಳೆ ಸಾಲ ಸಂಪೂರ್ಣ ಮನ್ನ ಮಾಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೈಗಾರಿಕೆಗಳು ನಷ್ಟವಾದರೆ ಸಾಲಮನ್ನ ಮಾಡುವ ಸರ್ಕಾರಗಳಿಗೆ ರೈತರ ಸಾಲ ಮನ್ನಾ ಮಾಡಲು ಮುಜುಗರ ಯಾಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಬರ ಪೀಡಿತ ಪ್ರದೇಶದ ರೈತರಿಗೆ ಬೆಳೆ ನಷ್ಟ ಪರಿಹಾರವಾಗಿ ಎಕರೆಗೆ 25000 ಕೂಡಲೇ ಬಿಡುಗಡೆ ಮಾಡಬೇಕು. ಸರ್ಕಾರದಲ್ಲಿ ಹಣ ಇಲ್ಲವಾದರೆ ಎಂಎಲ್ಎಗಳು ಮಂತ್ರಿಗಳು ನಿಮ್ಮ ಸಂಬಳಗಳನ್ನ ತೆಗೆದುಕೊಳ್ಳುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ದನ ಕರುಗಳ ಮೇವಿಗಾಗಿ ಮೇವು ಬ್ಯಾಂಕ್ ತೆರೆದು, ಮೇವು ಪೂರೈಕೆ ಮಾಡಬೇಕು.ಎಐ ತಂತ್ರಜ್ಞಾನ ಮೇವು ಪೂರೈಸುವುದಿಲ್ಲ, ಅದಕ್ಕೂ ರೈತರ ಶ್ರಮವೇ ಬೇಕು. ರೈತರು ವಲಸೆ ಹೋಗುವುದನ್ನ ತಪ್ಪಿಸಲು ಕೂಡಲೇ ಎನ್ಆರ್ಇಜಿ ಕಾಮಗಾರಿ ಕೈಗೆತ್ತಿಕೊಂಡು ರೈತರಿಗೆ ಧನ ಸಹಾಯ ಮಾಡಬೇಕು. ಒಣಗುತ್ತಿರುವ ಬೆಳೆಗಳನ್ನು ರಕ್ಷಿಸಲು ಕೃಷಿ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.