
ಮೈಸೂರು: ಆಸ್ತಿ ವಿಚಾರಕ್ಕೆ ತಂಗಿಯ ಮಗನ ಕೊಲೆ ಮಾಡಿಸಲು ಅಣ್ಣನೇ ೩೦ ಲಕ್ಷ ರೂ. ಸುಪಾರಿ ನೀಡಿದ್ದ
ಪ್ರಕರಣವನ್ನು ಜಿಲ್ಲೆಯ ಪಿರಿಯಾಪಟ್ಟಣ ಠಾಣೆಯ ಪೊಲೀಸರು ಭೇದಿಸಿದ್ದು, ಪ್ರಕರಣದಲ್ಲಿ ಅಣ್ಣ ಸೇರಿದಂತೆ ೬ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಪ್ರಕರಣದ ಪ್ರಮುಖ ಆರೋಪಿಯಾದ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ರಾಜು @ ಸೌದೆ ರಾಜು (೫೭) ವರ್ಷ, ಸುಳ್ಯತಾಲೂಕಿನ ಸಂಪಾಜೆಯ ನಿವಾಸಿ ಶಫೀ.ಕೆ.ಪಿ , ಪಿರಿಯಾಪಟ್ಟಣದ ಶಿವಪುರ ಬಡಾವಣೆಯ
ಮೀರ್ ಹುಸೇನ್ ಅಲಿ @ ಸುಲ್ತಾನ್ , ನಯಾಜ್ ಅಹಮದ್ (೪೩) ಹಾಗೂ ಮೈಸೂರಿನ ಸುಣ್ಣದ ಕೇರಿಯ ಅಯಾಜ್ ಪಾಷಾ @ ಹೀರೋ( ೨೮) ಹಾಗೂ ಅಮೀನುಲ್ಲಾ (೩೫) ಬಂಧಿತ ಆರೋಪಿಗಳು.
ಏಪ್ರಿಲ್ ೧೩ ರಂದು ಸಂಜೆ ೬.೪೫ ಕ್ಕೆ ಪಿರಿಯಾಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಮುಸುಕುಧಾರಿಗಳು ಪಲ್ಸರ್ ಬೈಕ್ನಲ್ಲಿ ಬಂದು ಪ್ರವೀಣ್ ಕುಮಾರ್ ಮೇಲೆ ಮಾರಕಾಸ್ತçಗಳಿಂದ ಕೊಲೆಗೆ ಯತ್ನಿಸಿದ್ದರು. ತೀವ್ರವಾಗಿ ಗಾಯಗೊಂಡ ಪ್ರವೀಣ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.
ಹಿಂದಿನ ಅಪಘಾತಕ್ಕೂ ನಂಟು: ೨೧.೪.೨೦೨೫ ರಂದು ಹಿಟ್ಟಳ್ಳಿ ಗ್ರಾಮದ ಕೆರೆಯ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಪ್ರವೀಣ್ ಕುಮಾರ್ಗೆ ಹಿಂದಿನಿAದ ಕಾರೊಂದು ಡಿಕ್ಕಿ ಹೊಡೆದಿತ್ತು. ಈ ಅಪಘಾತಕ್ಕೂ ಸೌದೆ ರಾಜು ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ದಾಖಲಾಗಿತ್ತು. ಬೆಟ್ಟದಪುರ ಗ್ರಾಮದ ಮರದ ವ್ಯಾಪಾರಿ ಸೌದೆ ರಾಜು @ ರಾಜು (೫೭) ಎಂಬಾತ ಆಸ್ತಿ ವಿಚಾರಕ್ಕೆ ತಂಗಿಯ ಮಗ ಪ್ರವೀಣ್ ಕುಮಾರ್ನನ್ನು ಕೊಲೆ ಮಾಡಲು ಸುಳ್ಯ ಮೂಲದ ಶಫೀ.ಕೆ.ಪಿ ಎಂಬಾತನಿಗೆ ೭ ಲಕ್ಷಕ್ಕೆ ಸುಪಾರಿ ನೀಡಿದ್ದುದು ವಿಚಾರಣೆ ವೇಳೆ ಗೊತ್ತಾಗಿದೆ. ಶಫೀ ಕೊಲೆ ಉದ್ದೇಶದಿಂದಲೇ ಕಾರಿನಿಂದ ಅಪಘಾತ ಮಾಡಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪ್ರಕರಣದ ಕುರಿತು ಮಾಹಿತಿ ನೀಡಿದರು.
೩೦ ಲಕ್ಷದ ಮತ್ತೊಂದು ಡೀಲ್: ಸೌದೆ ರಾಜುವನ್ನು ಹೆಚ್ಚಿನ ವಿಚಾರಣೆ ಒಳಪಡಿಸಿದಾಗ, ಪಿರಿಯಾಪಟ್ಟಣದ ಶಿವಪುರ ಬಡಾವಣೆಯ ಮೀರ್ ಹುಸೇನ್ ಅಲಿ @ ಸುಲ್ತಾನ್ ಗೆ ೩೦ ಲಕ್ಷಕ್ಕೆ ಸುಪಾರಿ ನೀಡಿರುವುದು ಗೊತ್ತಾಗಿದೆ.
ಸುಲ್ತಾನ್, ಹುಣಸೂರು ರೌಡಿ ಶೀಟರ್ ನಯಾಜ್ ಅಹಮದ್ (೪೩) ಮೂಲಕ ಹಬೀಬ್ ಪಾಷಾ @ ಹೀರೋ, ಅಯಾಜ್ ಪಾಷಾ @ ಭಯ್ಯಾ @ ಇಬ್ರಾಹಿಂ @ ಉಸ್ತಾದ್ (೪೩) ಮತ್ತು ಅಮೀನುಲ್ಲಾ (೩೫) ಅವರುಗಳಿಗೆ ಸುಪಾರಿ ನೀಡಿದ್ದ.
೧೩.೪.೨೦೨೬ ರಂದು ಹಬೀಬ್ ಪಾಷಾ ಮತ್ತು ಅಯಾಜ್ ಪಾಷಾ ಕೊಲೆ ಯತ್ನದ ಕೃತ್ಯ ಎಸಗಿದ್ದಾರೆ ಎಂದು ತಿಳಿಸಿದರು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ೪ ಫೋನ್, ೧೦,೦೦೦ ರೂ, ಹಳದಿ ಬಣ್ಣದ ಪಲ್ಸರ್ ಬೈಕ್ ಮತ್ತು ೧ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಹುಣಸೂರು ಡಿ.ಎಸ್.ಪಿ ರವಿ ಅವರ ನೇತೃತ್ವದಲ್ಲಿ ಪಿರಿಯಾಪಟ್ಟಣ ಪಿಐ ಗೋವಿಂದರಾಜು ಎಂ.ವಿ, ಬೈಲಕುಪ್ಪೆ ವೃತ್ತ ನಿರೀಕ್ಷಕ ದೀಪಕ್ ಎಂ.ಕೆ, ಪಿಎಸ್ಐಗಳಾದ ಜಗದೀಶ್ ಬಿ.ಹೆಚ್, ಅಜಯ್ ಕುಮಾರ್ ಡಿ.ಎಸ್, ರವಿಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಸಿ.ಮಲ್ಲಿಕ್ ಮತ್ತಿತರರು ಹಾಜರಿದ್ದರು.