Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಸಾಧನೆಗೆ ದೊರೆತ ಪ್ರಶಸ್ತಿಯನ್ನು ನಿರಾಕರಿಸುವುದು ದೊಡ್ಡ ಅಂಹಕಾರವಾಗುತ್ತದೆ; ಹಿರಿಯ ಸಾಹಿತಿ ಸಿಪಿಕೆ


ಮೈಸೂರು : ಸಾಧನೆಗೆ ದೊರೆತ ಪ್ರಶಸ್ತಿಯನ್ನು ನಿರಾಕರಿಸುವುದು ದೊಡ್ಡ ಅಂಹಕಾರವಾಗುತ್ತದೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ (ಸಿಪಿಕೆ) ಹೇಳಿದರು.
ಆತ್ಮಶ್ರೀ ಕನ್ನಡ ಸಾಂಸ್ಕತಿಕ ಪ್ರತಿಷ್ಠಾನ ಮತ್ತು ಗ್ಲೋಬಲ್ ಎಜುಕೇಷನ್ ಟ್ರಸ್ಟ್ ವತಿಯಿಂದ ನಗರದ ಹೂಟಗಳ್ಳಿಯಲ್ಲಿರುವ ದಕ್ಷ ಕಾಲೇಜಿನ ಸಭಾಂಗಣದಲ್ಲಿ ನಡೆದ ‘ಕೃತಕ ಬುದ್ಧಿಮತ್ತೆ’ ಕುರಿತು ವಿಚಾರಗೋಷ್ಠಿ, ಕಿರುಚಿತ್ರ ಪ್ರದರ್ಶನ ಹಾಗೂ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ‘ನಾಡಕೀರ್ತಿ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಅವರು, ಸಾಧಕರೆಲ್ಲ ಗುಣವಂತರು. ಸಂಘಟಕರೆಲ್ಲ ಗುಣಗ್ರಾಹಿಗಳು. ಗುಣವಂತ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಗುಣಗ್ರಾಹಿಗಳಾದ ಸಂಘಟಕರು ಈ ಹೊತ್ತು ದಕ್ಷತೆಯಿಂದ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಇಂದು ಇಡೀ ನಾಡಿನಲ್ಲಿ ಪ್ರಶಸ್ತಿಗಳ, ಸನ್ಮಾನಗಳ ಮಹಾಪೂರವೇ ಕಂಡು ಬರುತ್ತಿದೆ. ಇವೆಲ್ಲ ಸಾರ್ಥಕವಾಗಬೇಕಾದರೆ ಅರ್ಹ ಸಾಧಕರಿಗೆ ಅರ್ಹ ವಯಸ್ಸಿನಲ್ಲಿ ಸಿಗಬೇಕು. ನಾವು ನಮ್ಮ ಕ್ಷೇತ್ರದಲ್ಲಿ ಬೇಕಾದಷ್ಟು ಕೆಲಸ ಮಾಡಿರುವೆ. ನನಗೆ ಪ್ರಶಸ್ತಿ ಸಿಗಲೇ ಬೇಕಿತ್ತು. ಆದರೂ ಸಿಕ್ಕಿಲ್ಲ ಎನ್ನುವುದು ಅಹಂಕಾರವಾಗುತ್ತದೆ. ಹಾಗೆ ಸಾಧನೆಗೆ ದೊರೆತ ಪ್ರಶಸ್ತಿಯನ್ನು ನಿರಾಕರಿಸುವುದು ದೊಡ್ಡ ಅಂಹಕಾರವಾಗುತ್ತದೆ ಎಂದು ನುಡಿದರು.
ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ಕಲಾ ಮಾಧ್ಯಮ ರಂಜನೆಗಷ್ಟೇ ಸೀಮಿತವಾಗಬಾರದು. ಅದು ಸಮಾಜಕ್ಕೆ ಬೋಧನೆಯನ್ನೂ ಮಾಡಬೇಕು. ನಾಟಕ, ಚಲನಚಿತ್ರ, ಧಾರವಾಹಿಗಳು ರಂಜನೆಯ ಜೊತೆಗೆ ಸಾಮಾಜಿಕ ಸಂದೇಶವನ್ನೂ ನೀಡಿದಾಗ ಮಾತ್ರ ಕಲಾ ಮಾಧ್ಯಮ ಸಾರ್ಥಕತೆ ಪಡೆಯಲು ಸಾಧ್ಯ ಎಂದು ಹೇಳಿದರು.
ಜಾಗತೀಕರಣ ಪ್ರಕ್ರಿಯೆ ವೇಗ ಪಡೆದ ಮೇಲೆ ತಂತ್ರಜ್ಞಾನದ ಬಳಕೆ ಹೆಚ್ಚಾಗಿದೆ. ಅದರಲ್ಲೂ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಅಪಾರ ಮನ್ನಣೆ ಪಡೆದಿದೆ. ಇದರಿಂದ ಹಲವು ಕ್ಷೇತ್ರಗಳಲ್ಲಿ ಮಹತ್ತರವಾದ ಬದಲಾವಣೆಗಳಾಗಿವೆ. ಆದರೂ ಕೂಡ ಎಐ ತಂತ್ರಜ್ಞಾನದ ಮೇಲಿನ ವಿಪರೀತ ಅವಲಂಬನೆ ಸಲ್ಲದು. ಇದೇ ಮುಂದೆ ಹಲವು ಅಪಾಯಗಳನ್ನು ತಂದೊಡ್ಡಬಹುದು ಎಂದು ಎಚ್ಚರಿಸಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾಧ್ಯಕ್ಷ ನಾಗರಾಜು ವಿ. ಬೈರಿ ಉದ್ಘಾಟಿಸಿದರು. ಹಿರಿಯ ಸಾಹಿತಿ ಎಸ್. ಅಕ್ಬರ್ ಪಾಷ ಅಧ್ಯಕ್ಷತೆ ವಹಿಸಿದ್ದರು. ಅಬಕಾರಿ ಇಲಾಖೆಯ ಮಂಡ್ಯ ಜಿಲ್ಲಾ ಉಪ ಆಯುಕ್ತ ಬಿ.ಆರ್. ಹಿರೇಮಠ ವಿವಿಧ ಪ್ರಶಸ್ತಿಗಳ ಪ್ರದಾನ ಮಾಡಿದರು. ದಕ್ಷ ಕಾಲೇಜಿನ ವಿದ್ಯಾರ್ಥಿಗಳಾದ ಆರ್. ತಾರುಣ್ಯ, ಕೆ.ಎನ್. ದಕ್ಷಂತ, ರಕ್ಷಾ ಹಾಗೂ ಕೆ.ಎಸ್. ವಿಸ್ಮಯ ‘ಕೃತಕ ಬುದ್ಧಿಮತ್ತೆ’ ಕುರಿತು ವಿಚಾರ ಮಂಡಿಸಿದರು.
ಇದೇ ಸಂದರ್ಭದಲ್ಲಿ ಪಂಪ ಪ್ರಶಸ್ತಿ ಪುರಸ್ಕöÈತ ಬಹುಶ್ರುತ ವಿದ್ವಾಂಸ ಡಾ. ಸಿಪಿಕೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ದಕ್ಷ ಕಾಲೇಜಿನ ಅಧ್ಯಕ್ಷ ಡಾ.ಪಿ. ಜಯಚಂದ್ರರಾಜು ಅವರಿಗೆ ‘ನಾಡಕೀರ್ತಿ ಪ್ರಶಸ್ತಿ’ಯನ್ನು, ಸಾಹಿತಿ ಟಿ. ಸತೀಶ್ ಜವರೇಗೌಡ ಅವರಿಗೆ ‘ಕನ್ನಡ ರತ್ನ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರದ ಸಾಧಕ ಮಹಿಳೆಯರಿಗೆ ‘ನಾರಿಶಕ್ತಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದ ಬಳಿಕ ಡಾ. ಗುಣವಂತ ಮಂಜು ನಿರ್ದೇಶನದ ‘ಅನುರಾಗ’ ಕಿರುಚಿತ್ರದ ಪ್ರದರ್ಶನ ನಡೆಯಿತು.
ವೇದಿಕೆಯಲ್ಲಿ ಕೆ.ಆರ್. ನಗರದ ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕ ಕೆ.ಎಸ್. ಸತೀಶ್ ಕುಮಾರ್, ಚಲನಚಿತ್ರ ನಟಿ ಭೂಮಿಕಾ, ಗಾಯಕಿ ಜಯಂತಿ ಭಟ್, ಸಮಾಜ ಸೇವಕ ಎಸ್. ಕಣ್ಣನ್, ಪ್ರಗತಿಪರ ರೈತ ಪುಟ್ಟಸ್ವಾಮಿಗೌಡ, ದಕ್ಷ ಕಾಲೇಜಿನ ಕಾರ್ಯದರ್ಶಿ ಸೋನಿಯಾ ಉಮಾಪತಿ, ಪ್ರಾಂಶುಪಾಲ ಎಂ. ಅಭಿಷೇಕ್, ಆತ್ಮಶ್ರೀ ಕನ್ನಡ ಸಾಂಸ್ಕöÈತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಗುಣವಂತ ಮಂಜು, ನಿವೃತ್ತ ಮುಖ್ಯ ಶಿಕ್ಷಕ ಗೌಡಯ್ಯ ಉಪಸ್ಥಿತರಿದ್ದರು.