
ಮೈಸೂರು; ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಹಿಂದೂ ಸಮಾಜದ ಮೌಲ್ಯಗಳ ನೆಲಗಟ್ಟಿನ ಮೇಲೆ, ವ್ಯಕ್ತಿ ನಿರ್ಮಾಣದಿಂದ ರಾಷ್ಟç ನಿರ್ಮಾಣ ಎಂಬ ಮೂಲ ಮಂತ್ರವನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದು ವಕ್ತಾರ ಜಯರಾಮ್ ಬೊಳ್ಳಾಜೆ ತಿಳಿಸಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಬಿಎಸ್ಎಸ್ ವಿದ್ಯೋದಯ ಶಾಲೆಯ ಸಭಾಂಗಣದಲ್ಲಿ ನಡೆದ ಮೈಸೂರು ಮಹಾನಗರದ ವತಿಯಿಂದ ಪ್ರಮುಖ ನಾಗರೀಕ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಘ ಸ್ಥಾಪನೆಯ ಉದ್ದೇಶ, ಕಾರ್ಯಶೈಲಿ ಹಾಗೂ ಕಾರ್ಯವ್ಯಾಪ್ತಿಯನ್ನು ಸವಿವರವಾಗಿ ಪ್ರಸ್ತುತಪಡಿಸಿದರು.
ಸಂಘವು ಹಿಂದೂ ಸಮಾಜದ ಮೌಲ್ಯಗಳ ನೆಲಗಟ್ಟಿನ ಮೇಲೆ, ವ್ಯಕ್ತಿ ನಿರ್ಮಾಣದಿಂದ ರಾಷ್ಟç ನಿರ್ಮಾಣ ಎಂಬ ಮೂಲ ಮಂತ್ರವನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದೆ. ಹಿಂದೂ ಎನ್ನುವುದು ಒಂದು ರಿಲಿಜಿಯನ್ ಅಲ್ಲ, ಅದೊಂದು ಶ್ರೇಷ್ಠ ಜೀವನ ಶೈಲಿ. ಇದನ್ನು ಭಾರತದ ಸುಪ್ರೀಂ ಕೋರ್ಟ್ ಕೂಡ ಹಲವು ಬಾರಿ ಉಲ್ಲೇಖ ಮಾಡಿದೆ ಎಂದರು.
ಹೇಗೆ ಸಕ್ಕರೆಯ ಡಬ್ಬಿಗೆ ಖಾರದ ಪುಡಿ ಎಂಬ ಸ್ಟಿಕ್ಕರ್ ಅಂಟಿಸಿದರೂ ಇರುವೆಗಳಿಗೆ ಸಕ್ಕರೆ ಯಾವುದು ಎನ್ನುವುದು ಸ್ಪಷ್ಟವಾಗಿ ತಿಳಿಯುವುದೋ, ಹಾಗೆಯೇ ಕಳೆದ ನೂರು ವರ್ಷಗಳಲ್ಲಿ ಸಂಘದ ಮೇಲೆ ರಾಜಕೀಯ ಉದ್ದೇಶಗಳಿಂದ ಹಲವಾರು ಕೆಟ್ಟ ಆರೋಪಗಳನ್ನು ಮಾಡಿದರೂ, ಹಿಂದೂ ಸಮಾಜ ಸಂಘದ ನಿಜವಾದ ಧೇಯೋದ್ದೇಶಗನ್ನು ಅರಿತು ಸಂಘಟನೆಯ ಜತೆ ಒಂದಾದರು ಎಂದು ಹೇಳಿದರು. ಆದರೆ, ಇತ್ತೀಚಿಗೆ ಹಿಂದೂ ಸಮಾಜದಲ್ಲಿ ಸಂಸಾರದ ಭಾರದಿಂದ ಸಂಸ್ಕಾರ ಕಡಿಮೆ ಆಗುತ್ತಿದೆ. ನಾವು ಮೂಲವನ್ನು ಮರೆತಿದ್ದೇವೆ. ನಾವು ಕಳೆದುಕೊಂಡಲ್ಲಿಯೇ ಹುಡುಕಿ ಮೌಲ್ಯಗಳನ್ನು ಮರುಸ್ಥಾಪಿಸಬೇಕು, ಇದು ಕುಟುಂಬ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಿಕೊಂಡಾಗಲಷ್ಟೇ ಸಾಧ್ಯ ಎಂದು ತಿಳಿಸಿದರು.
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ನೆರೆದಿದ್ದ ನಾಗರಿಕರು ಹಿಂದೂ ಸಮಾಜದ ಸಮಸ್ಯೆಗಳು ಹಾಗೂ ಸವಾಲುಗಳ ಬಗ್ಗೆ ಹಾಗೂ ಅದರ ಪರಿಹಾರಗಳ ಕುರಿತು ಜಯರಾಮ್ ಬೊಳ್ಳಾಜೆ ಯವರ ಜತೆ ಸುಧೀರ್ಘ ಚರ್ಚೆ ನಡೆಸಿದರು. ಕಾರ್ಯಕ್ರಮದ ಕೊನೆಯಲ್ಲಿ ಬೊಳ್ಳಾಜೆಯವರು ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕೈಗೊಂಡಿರುವ ಸಂಕಲ್ಪಗಳಾದ ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಕುಟುಂಬ ಪ್ರಭೋಧನೆ, ಸ್ವದೇಶೀ ಜೀವನಶೈಲಿ ಹಾಗೂ ನಾಗರೀಕ ಕರ್ತವ್ಯ ಎಂಬ ಪಂಚ ಪರಿವರ್ತನೆಗಳ ಬಗ್ಗೆ ವಿವರಿಸಿದರು.