
ಮೈಸೂರು; ಲಿಂಗೈಕ್ಯರಾದ ಇಲ್ಲಿನ ಹೊಸಮಠದ (ನಟರಾಜ ಸಂಸ್ಥೆ) ಅಧ್ಯಕ್ಷರಾದ ಶ್ರೀ ಚಿದಾನಂದ ಸ್ವಾಮಿಯವರ ಅಂತಿಮ ದರ್ಶನವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಡೆದರು.
ವಿಷಯ ತಿಳಿದು ಮಠಕ್ಕೆ ಆಗಮಿಸಿದ ಅವರು, ಸ್ವಾಮೀಜಿಯವರ ಪಾರ್ಥಿವ ಶರೀರಕ್ಕೆ ಪುಷ್ಪಮಾಲೆ ಹಾಕಿ ಅಂತಿಮ ನಮನ ಸಲ್ಲಿಸಿದರು. ಸ್ವಾಮೀಜಿಯವರ ನಿಧನ ಅತೀವ ದುಃಖವಾಗಿದೆ. ಶ್ರೀ ಚಿದಾನಂದ ಸ್ವಾಮಿಯವರು ನಟರಾಜ ವಿದ್ಯಾಸಂಸ್ಥೆಯ ಮೂಲಕ ಮೈಸೂರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹ ನೀಡಿ, ಅವರ ಭವಿಷ್ಯಕ್ಕೆ ಬೆಳಕಾಗಿದ್ದರು. ಪೂಜ್ಯರ ಕೊಡುಗೆ ಸದಾ ಸ್ಮರಣೀಯ. ಅವರ ಅಗಲಿಕೆಯಿಂದ ಧಾರ್ಮಿಕ ಕ್ಷೇತ್ರದ ಜೊತೆಗೆ ಸಮಾಜ ಹಾಗೂ ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ. ಪೂಜ್ಯರ ದಿವ್ಯ ಆತ್ಮಕ್ಕೆ ಸದ್ಗತಿ ದೊರೆಯಲಿ, ಅವರ ಭಕ್ತರು ಮತ್ತು ಶಿಷ್ಯವೃಂದಕ್ಕೆ ಗುರುಗಳ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.