
ಓದುವ ಹವ್ಯಾಸ ಬೆಳಸಿಕೊಳ್ಳಿ : ಕೀರ್ತಿ. ಟಿ ಜಿ
ಪಿರಿಯಾಪಟ್ಟಣ : ವಿದ್ಯಾರ್ಥಿಗಳ ಓದುವ ಪ್ರೀತಿಯನ್ನು ಬೆಳೆಸುವ ಮತ್ತು ಅವರ ಜ್ಞಾನದ ಪರಿಧಿಯನ್ನು ವಿಸ್ತರಿಸುವ ಉದ್ದೇಶದಿಂದ ಸರ್ಕಾರ ಗ್ರಂಥಾಲಯವನ್ನು ಪ್ರಾರಂಭಮಾಡಿದೆ ಎಂದು ದೊಡ್ಡಕಮರವಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ಕೀರ್ತಿ. ಟಿ ಜಿ ತಿಳಿಸಿದರು.
ತಾಲೂಕಿನ ದೊಡ್ಡಕಮರವಳ್ಳಿಯಲ್ಲಿ ನೂತನ ಡಿಜಿಟಲ್ ಗ್ರಂಥಾಲಯ, ಮಾಹಿತಿ ಮತ್ತು ಅರಿವು ಕೇಂದ್ರ ಉದ್ಘಾಟನೆ ಮಾಡಿ ಮಾತನಾಡಿದ ಅವರು ಗ್ರಾಮೀಣ ಸಮುದಾಯಗಳಲ್ಲಿ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವುದರ ಜೊತೆಗೆ ಡಿಜಿಟಲ್ ಅಂತರವನ್ನು ಕಡಿಮೆ ಮಾಡುವ ಮಹತ್ವದ ಹೆಜ್ಜೆಯಾಗಿದೆ ಗ್ರಂಥಾಲಯದಲ್ಲಿ ದೈನಂದಿನ ಪತ್ರಿಕೆ, ಕಥೆ, ಕಾದಂಬರಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಪುಸ್ತಕಗಳು ಇದ್ದು, ಯುವಕರು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಗ್ರಂಥಾಲಯದ ಅಪಾರ ಸಂಪನ್ಮೂಲಗಳನ್ನು ಗರಿಷ್ಠವಾಗಿ ಬಳಸಿಕೊಂಡು ನಿರಂತರ ಕಲಿಕೆ ಮತ್ತು ಮುಂಬರುವ ಪರೀಕ್ಷೆಗಳಿಗೆ ತಯಾರಿ ಮಾಡುವ ವಿದ್ಯಾರ್ಥಿಗಳು ತಮ್ಮ ಬಳಿ ಲಭ್ಯವಿರುವ ಜ್ಞಾನದ ಸಂಪತ್ತಿನ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು
ಗ್ರಂಥಾಲಯ ಮೇಲ್ವಿಚಾರಕರಾದ ಉಮೇಶ್. ಕೆ ಮಾತನಾಡಿ ಈ ಗ್ರಂಥಾಲಯವು ಗ್ರಾಮಸ್ಥರಿಗೆ ಪ್ರಮುಖ ಆನ್ಲೈನ್ ಮಾಹಿತಿ ಮತ್ತು ಸಾರ್ವಜನಿಕ ಸೇವೆಗಳನ್ನು ಪಡೆಯಲು ಸಹ ನೆರವಾಗಲಿದ್ದು, ಗ್ರಾಮದಲ್ಲಿ ಡಿಜಿಟಲ್ ಅರಿವು ಮತ್ತು ಒಳಗೊಳ್ಳುವಿಕೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ. ಈ ಕೇಂದ್ರವು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ, ಡಿಜಿಟಲ್ ಶಿಕ್ಷಣದ ಅವಕಾಶಗಳನ್ನು ಪಡೆಯುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವುದರಲ್ಲಿ ನೆರವಾಗಲಿದೆ ಕಲಿಕೆಯ ಗುಣಮಟ್ಟ ಇನ್ನಷ್ಟು ಉತ್ತಮಗೊಳ್ಳಲಿದ್ದು, ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾರ್ಗದರ್ಶನ ದೊರೆಯಲಿದೆ ಆದ್ದರಿಂದ ಎಲ್ಲರೂ ಗ್ರಂಥಾಲಯದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ದೊಡ್ಡಕಮರವಳ್ಳಿ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಶಿವಣ್ಣ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಪುಟ್ಟಸ್ವಾಮಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗುರುಸ್ವಾಮಿ, ಯಜಮಾನರಾದ ಕಲ್ಯಾಣಪ್ಪ, ಶಿವಪುತ್ರ, ಅರ್ಚಕರಾದ ರಂಗಸ್ವಾಮಿ ಸೇರಿದಂತೆ ಗ್ರಾಮಸ್ಥರು, ಯುವ ಮಿತ್ರರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು