
ಮೈಸೂರು; ನಗರದ ಹೆಬ್ಬಾಳ್ನಲ್ಲಿರುವ ಜೆಎಸ್ಎಸ್ ಅರ್ಬನ್ ಹಾತ್ನಲ್ಲಿ “ಹಾಥ್ ಕರ್ಗ್ ಉತ್ಸವ್ ನನ್ನ ಕೈಮಗ್ಗ, ನನ್ನ ಹೆಮ್ಮೆ” ಎಂಬ ರಾಜ್ಯಮಟ್ಟದ ಕೈಮಗ್ಗ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆ. 26 ರಿಂದ ಸೆ.8 ರವರೆಗೆ 14 ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಜೆಎಸ್ಎಸ್ ವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ಉಪ ನಿರ್ದೇಶಕ ಬಿ.ಇಳಂಗೋವನ್ ತಿಳಿಸಿದರು.
ಸೋಮವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಭಾರತ ಸರ್ಕಾರದ ಜವಳಿ ಸಚಿವಾಲಯದ ಅಭಿವೃದ್ಧಿ ಆಯುಕ್ತರು (ಕೈಮಗ್ಗ), ನವದೆಹಲಿ ಅವರ ಸಹಯೋಗದಲ್ಲಿ, ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ (ಕಾವೇರಿ ಹ್ಯಾಂಡ್ಲೂಮ್ಸ್), ಬೆಂಗಳೂರು, ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಮೈಸೂರು ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ಇವರ ಸಂಯುಕ್ತ ಆಶ್ರಯದಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ.
ಕೈಮಗ್ಗ ನೇಕಾರರು ಹಾಗೂ ನೇಕಾರ ಸಹಕಾರ ಸಂಘಗಳು ತಯಾರಿಸುವ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಒದಗಿಸುವುದು, ಸಾಂಪ್ರದಾಯಿಕ ಕೈಮಗ್ಗ ಕಲೆಯನ್ನು ಉಳಿಸಿ ಬೆಳೆಸುವುದು ಹಾಗೂ ನೇಕಾರರ ಜೀವನೋಪಾಯಕ್ಕೆ ಬೆಂಬಲ ನೀಡುವುದು ಮೇಳದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಮೇಳದಲ್ಲಿ ದೇಶದ ವಿವಿಧ ಭಾಗಗಳಿಂದ 60ಕ್ಕೂ ಹೆಚ್ಚು ಕೈಮಗ್ಗ ನೇಕಾರರು ಹಾಗೂ ಕರಕುಶಲಕರ್ಮಿಗಳು ಭಾಗವಹಿಸಲಿದ್ದು, ನೇಕಾರರು ತಮ್ಮ ಕೈಯಾರೆ ತಯಾರಿಸಿದ ವೈವಿಧ್ಯಮಯ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ.
ಕರ್ನಾಟಕದ ಮೊಳಕಾಲ್ಮೂರು ಸೀರೆ, ಇಳಕಲ್ ಸೀರೆ, ರೇಷ್ಮೆ ಸೀರೆ, ಕಾಟನ್ ಸೀರೆ, ಕಸೂತಿ ಸೀರೆ, ಬೆಡ್ಶೀಟ್ಗಳು, ನೆಲಹಾಸುಗಳು ಸೇರಿದಂತೆ ವಿವಿಧ ಕೈಮಗ್ಗ ಉತ್ಪನ್ನಗಳು ಮೇಳದ ಪ್ರಮುಖ ಆಕರ್ಷಣೆಯಾಗಲಿವೆ. ವಿವಿಧ ರಾಜ್ಯಗಳ ಪ್ರಸಿದ್ಧ ಕೈಮಗ್ಗ ಉತ್ಪನ್ನಗಳು ಲಭ್ಯವಿರಲಿವೆ. ಗೌರಿ-ಗಣೇಶ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಮೈಸೂರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ತಮ್ಮ ಕುಟುಂಬದವರಿಗೆ ಉಡುಗೊರೆ ನೀಡಲು ಹಾಗೂ ಹಬ್ಬದ ಖರೀದಿಗಾಗಿ ವಿವಿಧ ರಾಜ್ಯಗಳ ವಿಶಿಷ್ಟ ರೇಷ್ಮೆ, ಹತ್ತಿ ಹಾಗೂ ಕೈಮಗ್ಗ ಉತ್ಪನ್ನಗಳನ್ನು ಒಂದೇ ಸ್ಥಳದಲ್ಲಿ ಖರೀದಿಸಬಹುದಾಗಿದೆ.
ಹಬ್ಬದ ಸಂಭ್ರಮದ ಜೊತೆಗೆ ನಮ್ಮ ನಾಡಿನ ಹಾಗೂ ದೇಶದ ಪಾರಂಪರಿಕ ಕೈಮಗ್ಗ ಮತ್ತು ಕರಕುಶಲ ಪರಂಪರೆಯನ್ನು ಬೆಂಬಲಿಸುವ ಅವಕಾಶವೂ ಇದಾಗಿದೆ. ಮೇಳವು ಪ್ರತಿದಿನ ಬೆಳಿಗ್ಗೆ 10.00 ಗಂಟೆಯಿAದ ರಾತ್ರಿ 9.00 ಗಂಟೆಯವರೆಗೆ ಸಾರ್ವಜನಿಕರಿಗಾಗಿ ತೆರೆದಿರುತ್ತದೆ. ಮೇಳಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಮೇಳಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಮೇಳದ ಉದ್ಘಾಟನಾ ಕಾರ್ಯಕ್ರಮವು ಆ. 26 ರಂದು ಸಂಜೆ 4 ಗಂಟೆಗೆ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ನಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜೆಎಸ್ಎಸ್ ಅರ್ಬನ್ ಹಾತ್ನ ಸಂಯೋಜಕ ರಾಕೇಶ್ ರೈ ಉಪಸ್ಥಿತರಿದ್ದರು.