
ಪಿರಿಯಾಪಟ್ಟಣ: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಹಾಗೂ ಅವರ ಧರ್ಮಪತ್ನಿ ಅಫ್ರೀನ್ ಕುಂದಾಪುರ ಅವರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯವಾದದ್ದು ಎಂದು ಪಿರಿಯಾಪಟ್ಟಣ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿಚಂದ್ರ ತಿಳಿಸಿದರು.
ಪತ್ರಕರ್ತರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ, ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರ ಕಚೇರಿಗೆ ತೆರಳಿ ಶಿರಸ್ತೆದಾರ್ ಶಕೀಲಾ ಭಾನುರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಅಕ್ರಮಗಳು ಹಾಗೂ ಭ್ರಷ್ಟಾಚಾರದ ಕುರಿತು ಸಾರ್ವಜನಿಕ ಹಿತಾಸಕ್ತಿಯಿಂದ ತನಿಖಾ ವರದಿ ಪ್ರಕಟಿಸಿದ್ದ ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರ ವರದಿಯ ಹಿನ್ನೆಲೆಯಲ್ಲಿ ವೈದ್ಯ ಡಾ. ಮಹೇಂದ್ರ ಶೆಟ್ಟಿ ವರ್ಗಾವಣೆಗೊಂಡಿದ್ದರು. ಈ ವೈಯಕ್ತಿಕ ದ್ವೇಷದಿಂದ ಸಾರ್ವಜನಿಕ ಸ್ಥಳದಲ್ಲಿ ಪತ್ರಕರ್ತ ಹಾಗೂ ಅವರ ಪತ್ನಿಯ ಮೇಲೆಯೇ ವೈದ್ಯ ಹಲ್ಲೆ ನಡೆಸಿ, ಗುಂಡಾವರ್ತನೆ ತೋರಿರುವುದು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭದ ಮೇಲಿನ ನೇರ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಮಾಜಿ ಅಧ್ಯಕ್ಷ ಸತೀಶ್ ಆರಾಧ್ಯ ಮಾತನಾಡಿ ಬೆದರಿಕೆ ಮತ್ತು ಹಿಂಸಾಚಾರದ ಮೂಲಕ ಪತ್ರಿಕಾರಂಗದ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿರುವ ಪ್ರವೃತ್ತಿಗೆ ಸರ್ಕಾರ ತಕ್ಷಣವೇ ತಡೆಹಾಕಿ ಸಂತ್ರಸ್ತ ಪತ್ರಕರ್ತನಿಗೆ ನ್ಯಾಯ ದೊರಕಿಸಿಕೊಡಬೇಕು
ಹಲ್ಲೆ ನಡೆಸಿದ ಡಾ. ಮಹೇಂದ್ರ ಶೆಟ್ಟಿ ಅವರನ್ನು ಕೂಡಲೇ ಬಂಧಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು.
ಸಾರ್ವಜನಿಕ ಸೇವೆಯಲ್ಲಿದ್ದುಕೊಂಡು ಕಾನೂನು ಕೈಗೆತ್ತಿಕೊಂಡ ವೈದ್ಯರ ವಿರುದ್ಧ ಕಠಿಣ ಆಡಳಿತಾತ್ಮಕ ಶಿಸ್ತುಕ್ರಮ ಕೈಗೊಳ್ಳಬೇಕು.
ಕರ್ತವ್ಯ ನಿರತ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಲು ಬಲವಾದ ಕಾನೂನು ಚೌಕಟ್ಟನ್ನು ರೂಪಿಸಬೇಕು ಎಂದು ಒತ್ತಾಯಿಸಿದರು
ಶಿರಸ್ತೆದಾರ್ ಶಕೀಲಾ ಭಾನುರವರಿಗೆ ಮಾತನಾಡಿ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಮಾನ್ಯ ಜಿಲ್ಲಾಧಿಕಾರಿ ಮುಖೇನ ಸರ್ಕಾರಕ್ಕೆ ತಲುಪಿಸಲು ಸಹಕರಿಸಸುತ್ತೇನೆ ಎಂದರು.
ಈ ವೇಳೆ ಶಿರಸ್ತೆದಾರ್ ವಿನೋದ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ಖಜಾಂಚಿ ಗಣೇಶ್ ಬಿ.ಆರ್, ಪತ್ರಕರ್ತರಾದ ಮಹೇಶ್ ಎಚ್. ಕೆ, ಅಶೋಕ್, ವಸಂತ್ ಕುಮಾರ್ ಸೇರಿದಂತೆ ಇತರಿರದ್ದರು.