Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಅಭಿಮನ್ಯುವಿಗೆ ಅಕ್ಷರ ತೇರಿನಲ್ಲಿ ಬೀಳ್ಕೊಡುಗೆ ಹಾಗೂ ಐತಿಚಂಡ ರಮೇಶ್ ಉತ್ತಪ್ಪ ಅವರ ಎರಡು ಕೃತಿಗಳ ಬಿಡುಗಡೆ


ಮೈಸೂರು: ಅಂಬಾರಿ ಆನೆ ಅಭಿಮನ್ಯುವಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆತನಿಗೆ ಅಕ್ಷರ ತೇರಿನಲ್ಲಿ ಭಾವ ಪೂರ್ಣವಾಗಿ ಬೀಳ್ಕೊಡುವ ಹಾಗೂ ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಅಭಿನ್ಯುವಿನ ಕುರಿತು ಭಾವನಾತ್ಮಕವಾಗಿ ಬರೆದ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮ ಸೆ. 9ರಂದು ಮೈಸೂರಿನಲ್ಲಿ ಆಯೋಜಿಸಲಾಗಿದೆ.
ಮೈಸೂರು ಕಲ್ಚರಲ್ ಅಸೋಸಿಯೇಷನ್, ಅರಣ್ಯ ಇಲಾಖೆಯ ಮೈಸೂರು ವನ್ಯಜೀವಿ ವಿಭಾಗ ಹಾಗೂ ನಗರ ಕೇಂದ್ರ ಗ್ರಂಥಾಲಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ಹಾಗೂ ಅಕ್ಷಿ ಪ್ರಕಾಶನಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ನಗರದ ಪೀಪಲ್ಸ್ ಪಾರ್ಕ್ನಲ್ಲಿರುವ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಐತಿಚಂಡ ರಮೇಶ್ ಉತ್ತಪ್ಪ ಅವರು ಕಳೆದ ಒಂದು ವರ್ಷದಿಂದ ಅಭಿಮನ್ಯುವಿನ ಕುರಿತು ಎರಡು ವಿಭಿನ್ನ ಕೃತಿಗಳನ್ನು ಬರೆದಿದ್ದಾರೆ. ಮೌನದ ಮಹಾಪಯಣ, ಅಭಿಮನ್ಯುವಿಗೆ ಒಲವಿನ ಓಲೆ' ಕೃತಿಯಲ್ಲಿ ಭಾವನಾತ್ಮವಾದ ಪತ್ರಗಳಿವೆ. ಅಭಿಮನ್ಯುವಿಗೆ ಪತ್ರಗಳ ಮೂಲಕ ಬೀಳ್ಕೊಡುವ ವಿಭಿನ್ನ ಪ್ರಯತ್ನವಾಗಿದೆ. ಲೇಖಕರ ಕಲ್ಪನೆಯಲ್ಲಿ ಅಭಿಮನ್ಯುವಿನೊಂದಿಗೆ ಒಡನಾಡಿದ ಆನೆಗಳು, ಮಾವುತರು, ಅಧಿಕಾರಿಗಳು, ಅಭಿಮಾನಿಗಳು ಪತ್ರ ಬರೆಯುತ್ತಾರೆ. ಕೊನೆಯಲ್ಲಿ ಅಭಿಮನ್ಯು ಕರುನಾಡ ಕನ್ನಡಿಗರಿಗೆ ಕೃತಜ್ಞತೆ ಅರ್ಪಿಸುವ ಪತ್ರವಿದೆ. ಮತ್ತೊಂದು ಕೃತಿ ಅಭಿಮನ್ಯುವಿಗೆ ಕಾವ್ಯಾರತಿ, ಅಂಬಾರಿ ವೀರನ ಅಕ್ಷರಗೌರವ’ ಕಾವ್ಯಮಾಲೆ. ಅಭಿಮನ್ಯುವಿನ ಕುರಿತು ಚಂಪೂ, ರಗಳೆ, ಲಾವಣಿ, ವಚನ, ಭಾವಗೀತೆ ಶೈಲಿಯಲ್ಲಿ ಕಾವ್ಯರಚಿಸಲಾಗಿದೆ. ಇದಂತೂ ಹೊಸ ಪ್ರಯತ್ನವಾಗಿದ್ದು, ಅಭಿಮನ್ಯುವಿಗೆ ವಿಭಿನ್ನ ರೀತಿಯಲ್ಲಿ ಬೀಳ್ಕೊಡುವ ಪ್ರಯತ್ನವಾಗಿದೆ.
ಅಂದು ಬೆಳಗ್ಗೆ 10.30ಕ್ಕೆ ಮೈಸೂರಿನ ಮಾಧ್ಯಮ ಮಿತ್ರರು ತೆಗೆದ ಅಭಿಮನ್ಯುವಿನ ವಿವಿಧ ಭಂಗಿಯ ಛಾಯಾಚಿತ್ರಗಳ ಪ್ರದರ್ಶನವನ್ನು ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಉದ್ಘಾಟಿಸಲಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಖ್ಯಾತ ವನ್ಯಜೀವಿ ತಜ್ಞರಾದ ಕೃಪಾಕರ ಸೇನಾನಿ ಅವರು ಉದ್ಘಾಟಿಸುತ್ತಾರೆ.
ಕೃತಿಗಳನ್ನು ವನ್ಯಜೀವಿ ವಿಭಾಗದ ಡಿಸಿಎಫ್ ಡಾ. ಐ.ಬಿ.ಪ್ರಭುಗೌಡ ಹಾಗೂ ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಬಿ.ಮಂಜುನಾಥ್ ಬಿಡುಗಡೆ ಮಾಡಲಿದ್ದಾರೆ. ಮೈಸೂರು ಕಲ್ಚರಲ್ ಅಸೋಸಿಯೇಷನ್‌ನ ಅಧ್ಯಕ್ಷ ಎ.ಪಿ.ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಅಭಿಮನ್ಯುವಿನ ಮಾವುತ ವಸಂತ ಅವರನ್ನು ಮೈಸೂರು ಕಲ್ಚರಲ್ ಅಸೋಸಿಯೇಷನ್‌ನ ಕಾರ್ಯದರ್ಶಿ ಮಹದೇವ್ ಸನ್ಮಾನಿಸಲಿದ್ದಾರೆ. ಕೃತಿಗಳ ಲೇಖಕ ಐತಿಚಂಡ ರಮೇಶ್ ಉತ್ತಪ್ಪ ಉಪಸ್ಥಿತಿ ಇರಲಿದ್ದಾರೆ.