
ಮೈಸೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿ.ವಿ ಕ್ರಿಯೇಷನ್ ಸಂಸ್ಥೆ ವತಿಯಿಂದ ಜಿಲ್ಲೆಯ ನಂಜನಗೂಡು ತಾಲೂಕಿನ ನವಿಲೂರಿನಲ್ಲಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಂಸ್ಥೆಯ ಸಂಸ್ಥಾಪಕಿ ವಿಮಲ ವೀರೇಶ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರಕೃತಿಯಿಂದ ಮನುಷ್ಯ, ಸಕಲ ಜೀವಿಗಳು ಬದುಕುತ್ತಿವೆ. ಪ್ರಕೃತಿ ಚೆನ್ನಾಗಿದ್ದರೆ, ಆರೋಗ್ಯವಿದ್ದರೆ ಜೀವ ಸಂಕುಲವೇ ಚೆನ್ನಾಗಿರುತ್ತದೆ, ಇಲ್ಲದಿದ್ದರೆ ಎಲ್ಲವೂ ನಾಶವಾಗುತ್ತದೆ. ಹಾಗಾಗಿ ಪ್ರಕೃತಿಯನ್ನು ರಕ್ಷಿಸುವುದು ಎಲ್ಲರ ಕರ್ತವ್ಯದೊಂದಿಗೆ ಜವಾಬ್ದಾರಿ ಕೂಡ ಆಗಿದೆ. ಪರಿಸರ ನಾಶವನ್ನು ತಡೆಯಲು ಹಾಗೂ ಪರಿಸರವನ್ನು ಉತ್ತಮವಾಗಿ ಮುಂದಿನ ಪೀಳಿಗೆಗೆ ನೀಡಲು ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಪರಿಸರ ಸಂರಕ್ಷಣೆಗೆ ಜಾಗೃತರಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಮ್ಮ ತೋಟದಲ್ಲಿ ಬೆಳೆದ ಸಸಿಗಳನ್ನು ಸ್ಥಳೀಯ ನಿವಾಸಿಗಳಿಗೆ ವಿತರಿಸಿ, ಪರಿಸರ ಸಂರಕ್ಷಣೆ, ಗಿಡಗಳ ಮಹತ್ವ ಹಾಗೂ ಹಸಿರು ಬೆಳೆಸುವ ಅಗತ್ಯದ ಕುರಿತು ಜಾಗೃತಿ ಮೂಡಿಸಿದರು. ಪರಿಸರ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ವೇಳೆ ಸಂಸ್ಥೆಯ ಲೋಕೇಶ್, ಸ್ಥಳೀಯ ಮುಖಂಡರುಗಳು ಹಾಜರಿದ್ದರು.