
ಮೈಸೂರು; ಜಲಾಶಯಗಳಿಂದ ಕೂಡಲೇ ನಾಲೆಗಳಿಗೆ ನೀರು ಬಿಡಿ, ಇಲ್ಲವೇ ಪ್ರತಿ ಎಕರೆಗೆ 50,000 ರೂ ಪರಿಹಾರ ಘೋಷಿಸಿ ಕಬಿನಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಅಗ್ರಹ
ಮೈಸೂರಿನ ಗನ್ ಹೌಸ್ ಹತ್ತಿರ ಜಮಾಯಿಸಿದ ಸಮಿತಿಯ ಸದಸ್ಯರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕೆ ಮೆರವಣಿಗೆ ಮೂಲಕ ಕಾಡ ಕಚೇರಿ ಮುಂಭಾಗಕ್ಕೆ ಆಗಮಿಸಿ, ಭತ್ತ ನಾಟಿ ಮಾಡಲು ನೀರು ಕೊಡಿ, ಕೃಷಿ ಇಲಾಖೆಯಿಂದ ಬಿತ್ತನೆ ಬೀಜಗಳು ಕ್ರಮ ಕೈಗೊಳ್ಳಿ, ಜಲಾಶಯಗಳಿಂದ ನಾಲೆಗಳಿಗೆ ನೀರು ಬಿಡಿಸುವಲ್ಲಿ ವಿಫಲವಾಗಿರುವ ಶಾಸಕರು ಜಿಲ್ಲಾ ಮಂತ್ರಿಗೆ ಧಿಕ್ಕಾರ ಕೂಗುತ್ತಾ, ಚಳುವಳಿ ನಡೆಸಿದರು.
ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಸಮಿತಿಯ ಅಧ್ಯಕ್ಷ ಹಳ್ಳಿ ಕೆರೆ ಹುಂಡಿ ಭಾಗ್ಯರಾಜ್, ಕಬಿನಿ ಜಲಾಶಯದ ಒಂದು ಲಕ್ಷ ಎಕ್ಟರ್ ಪ್ರದೇಶವನ್ನು ಅಚ್ಚುಕಟ್ಟು ಭಾಗ ಗುರುತಿಸಲಾಗಿದೆ. ಇದರಲ್ಲಿ ಭತ್ತ, ರಾಗಿ, ಜೋಳ, ಕಬ್ಬು, ತೆಂಗು ಬೆಳೆಗಳನ್ನು ಬೆಳೆಯಲಾಗಿದೆ. ಅಲ್ಲದೆ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯು ಸಹ ಸೇರಿದೆ. ಕಬಿನಿ ಜಲಾಶಯದಲ್ಲಿ ಈಗ ಸುಮಾರು 19 ವರೆ ಟಿಎಂಸಿ ನೀರು ಸಂಗ್ರಹವಾಗಿದ್ದರೂ, ಈ ಭಾಗದ ರೈತರಿಗೆ ನೀರು ಕೊಡುವಲ್ಲಿ ಇಲಾಖೆ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳು ವಿಫಲರಾಗುತ್ತಿದ್ದಾರೆ ಎಂದು ಆರೋಪಿಸಿದರು.
ಕಬಿನಿ ಜಲಾಶಯವನ್ನು ಕೇವಲ ತಮಿಳುನಾಡಿಗೆ ನೀರು ಬಿಡಲು ಮಾತ್ರ ನೀರಿನ ತೊಟ್ಟಿಯ ರೀತಿ ಬಳಸುತ್ತಿದ್ದಾರೆ. ಸ್ಥಳೀಯ ರೈತರ ಹಿತ ಗಮನ ಹರಿಸದೆ ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಈ ಭಾಗದ ರೈತರ ನೀರು ಬಿಡದಿದ್ದರೆ, ಕೃಷಿ ಚಟುವಟಿಕೆ ಸ್ಥಗಿತವಾಗಿ, ಜಾನುವಾರುಗಳಿಗೆ ಮೇವು ದೊರೆಯುವುದಿಲ್ಲ. ಅಂತರ್ಜಲ ಕುಸಿತವಾಗುತ್ತದೆ. ಕೆರೆಕಟ್ಟೆಗಳಿಗೆ ನೀರಿಲ್ಲದಂತಾಗಿ, ಈಗಾಗಲೇ ಬರದಿಂದ ತತ್ತರಿಸಿರುವ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದಂತಾಗುತ್ತದೆ. ಆದ್ದರಿಂದ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಚುನಾಯಿತ ಶಾಸಕರುಗಳು ನೀರು ಸಲಹಾ ಸಮಿತಿ ಸಭೆಯನ್ನು ನಡೆಸಿ, ಕಬಿನಿ ಎಡ ಮತ್ತು ಬಲ, ನುಗು ಜಲಾಶಯದ ಹುಲ್ಲಳ್ಳಿ ರಾಂಪುರ, ದೇವರಾಜ ಅರಸು ನಾಲೆ ರೈತರಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗುವ ಭರವಸೆಯ ನೀಡಬೇಕು. ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಇಂತಹ ರೈತ ಪರವಾಗಿ ಕೈಗೊಳ್ಳದ ಚುನಾಯಿತ ಪ್ರತಿನಿಧಿಗಳು ಆಗಸ್ಟ್ 15ರಂದು ಧ್ವಜಾರೋಹಣ ಮಾಡಲು ಅರ್ಹರಲ್ಲ. ಏಕೆಂದರೆ ರೈತರ ಕಷ್ಟ ಅರಿತು ರೈತರ ಸಮಸ್ಯೆಗೆ ಸ್ಪಂದಿಸಲು ವಿಫಲರಾದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಚುನಾಯಿತ ಪ್ರತಿನಿಧಿಗಳು ವಚನಭ್ರಷ್ಟರಾಗಿದ್ದಾರೆ. ಸಕಾಲದಲ್ಲಿ ರೈತರಿಗೆ ನೀರು ಬಿತ್ತನೆ ಬೀಜ ಕೊಡಲು ವಿಫಲವಾಗಿರುವ ಇವರಿಗೆ ಧ್ವಜಾರೋಹಣಕ್ಕೆ ಅರ್ಹತೆ ಇರುವುದಿಲ್ಲ. ರೈತರನ್ನು ಕಡೆಗಣಿಸದೆ ನೀವು ಧ್ವಜಾರೋಹಣಕ್ಕೆ ಅರ್ಹತೆ ಇದ್ದರೆ, ನೀರು ಸಲಹಾ ಸಮಿತಿ ಸಭೆ ನಡೆಸಿ, ರೈತರಿಗೆ ಕೃಷಿ ಚಟುವಟಿಕೆಗೆ ನೀರು ನೀಡಿ, ನಂತರ ಧ್ವಜಾರೋಹಣ ಮಾಡಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಖಜಾಂಚಿ ಕೆರೆಹುಂಡಿ ರಾಜಣ್ಣ, ಒಳಗೆರೆ ಗಣೇಶ್, ಪ್ರಕಾಶ್ ಗಾಂಧಿ, ಮಲಿಯೂರು ಮಹೇಂದ್ರ, ಗೌಡಕೆ ಸೋಮಣ್ಣ, ಅಂಗಡಿ ಸತೀಶ್, ದೇವನೂರು ನಾಗೇಂದ್ರ, ಕೆರೆಹುಂಡಿ ಶಿವಣ್ಣ , ಅರಳಿ ಕಟ್ಟೆ ಪ್ರಭುಸ್ವಾಮಿ, ಶ್ರೀಕಂಠ, ಮುದ್ದಾಹಳ್ಳಿ ಮಧು, ಜೆಸಿಬಿ ಚಿದಂಬರ., ಅಂಡುವಿನಹಳ್ಳಿ ಮಹೇಶ್, ಮಹದೇವಪ್ಪ ಮುಂತಾದ ನೂರಾರು ಜನರು ಹಾಜರಿದ್ದರು
