
*ಕುಟುಂಬದವರ ಒಪ್ಪಿಗೆ ಇಲ್ಲದೆ ಮರಣೋತ್ತರ ಪರೀಕ್ಷೆ ಮಾಡಿದ್ದಾರೆ; ಮೃತನ ಸಹೋದರಿ ಆರೋಪ
- ಕೆ.ಆರ್. ಆಸ್ಪತ್ರೆಯ ಶವಗಾರದ ಬಳಿ ಉದ್ವಿಗ್ನ ಪರಿಸ್ಥಿತಿ
ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಆಂಥೋನಿ, ಪೀಟರ್ ಹಾಗೂ ಕುಮಾರ್ ಬಲಿಯಾದ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದೆ. ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಗಾರದಲ್ಲಿರುವ ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಕುಟುಂಬಸ್ಥರು ಒಪ್ಪಿಗೆ ನೀಡದಿರುವ ನಡುವೆಯೇ, ಪೊಲೀಸರು ಹಾಗೂ ಜಿಲ್ಲಾಡಳಿತ ಅಮಾಯಕರನ್ನು ಯಾಮಾರಿಸಿ ಪೋಸ್ಟ್ಮಾರ್ಟಮ್ ಮುಗಿಸಿದ್ದಾರೆ ಎಂದು ಮೃತ ಪೀಟರ್ ಸಹೋದರಿ ಹಾಗೂ ವೃತ್ತಿಯಲ್ಲಿ ನರ್ಸ್ ಆಗಿರುವ ಮಾರ್ಗರೇಟ್ ಆರೋಪಿಸಿದ್ದಾರೆ.
ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿಯಾದ ಬಳಿಕ ಶವಗಳ ಮರಣೋತ್ತರ ಪರೀಕ್ಷೆಗೆ ಮೃತರ ಕುಟುಂಬಸ್ಥರೇ ಅಡ್ಡಿಪಡಿಸಿದ್ದರು. ಸ್ಥಳಕ್ಕೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಬಂದು ಸೂಕ್ತ ಪರಿಹಾರ ಘೋಷಿಸುವವರೆಗೆ ಮರಣೋತ್ತರ ಪರೀಕ್ಷೆಗೆ ಸಮ್ಮತಿಸುವುದಿಲ್ಲ ಎಂದು ಮೃತರ ಸಂಬAಧಿಕರು ಪಟ್ಟು ಹಿಡಿದಿದ್ದರು.
ಮೂವರಲ್ಲಿ ಇಬ್ಬರ ಮೃತದೇಹಗಳ ವೈಜ್ಞಾನಿಕ ಸ್ಕಾ÷್ಯನಿಂಗ್ ನಡೆಸಲು ಅಧಿಕಾರಿಗಳು ಮುಂದಾದರು. ಆದರೆ, ಶವಗಳನ್ನು ಸ್ಕಾ÷್ಯನಿಂಗ್ಗೆ ಕಳುಹಿಸುವ ವೇಳೆ ಸಂಬAಧಿಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ, ಶವಾಗಾರದ ಬಾಗಿಲಲ್ಲೇ ಶವದ ವಾಹನ ತಡೆದಿದ್ದಾರೆ. ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಮೃತದೇಹಗಳನ್ನು ಮತ್ತೆ ಶವಾಗಾರಕ್ಕೇ ವಾಪಸ್ ಕಳುಹಿಸಿದ್ದಾರೆ.
ಪಂಚನಾಮೆ ಹೆಸರಲ್ಲಿ ಸಹಿ ಪಡೆದು ಪೋಸ್ಟ್ ಮೌರ್ಟಮ್ ಮುಕ್ತಾಯ;
ಮೃತರ ಕುಟುಂಬಸ್ಥರ ಅಮಾಯಕತೆಯನ್ನೇ ದುರ್ಬಳಕೆ ಮಾಡಿಕೊಂಡಿರುವ ಪೊಲೀಸರು, ಕೇವಲ ಪಂಚನಾಮೆ ಪ್ರಕ್ರಿಯೆ ಎಂದು ಹೇಳಿ ಅವರಿಂದ ಸಹಿ ಪಡೆದುಕೊಂಡಿದ್ದಾರೆ. ಆದರೆ, ಕುಟುಂಬಸ್ಥರಿಗೆ ತಿಳಿಸದೇ, ಅವರ ಯಾವುದೇ ಒಪ್ಪಿಗೆಯೂ ಇಲ್ಲದೆ ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಮೃತ ಪೀಟರ್ ಅವರ ಸಹೋದರಿ ಹಾಗೂ ವೃತ್ತಿಯಲ್ಲಿ ನರ್ಸ್ ಆಗಿರುವ ಮಾರ್ಗರೇಟ್ ಅವರು ಶವಾಗಾರದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿ, ಜಿಲ್ಲಾಡಳಿತದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಾವು ಮೃತರ ದೇಹಗಲ ಮರಣೋತ್ತರ ಪರೀಕ್ಷೆಗೆ ಸಮ್ಮತಿಯನ್ನೇ ನೀಡಿರಲಿಲ್ಲ. ಆದರೆ ಹನೂರಿನಿಂದ ಮೈಸೂರಿನ ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ಬಂದು ನೋಡಿದಾಗ, ಈಗಾಗಲೇ ಎರಡು ಮೃತದೇಹಗಳ ಮರಣೋತ್ತರ ಪರೀಕ್ಷೆ ಮುಗಿದಿರುವುದು ಗೊತ್ತಾಗಿದೆ. ನಾನು ನರ್ಸ್ ಆಗಿರುವುದರಿಂದ ಶವಾಗಾರದ ಒಳಗಿನ ಸ್ಥಿತಿ ನೋಡಿ ಇದನ್ನು ಸ್ಪಷ್ಟವಾಗಿ ಹೇಳಬಲ್ಲೆ. ಶವಗಳ ಮುಂದೆ ನಮ್ಮನ್ನು ನಿಲ್ಲಿಸಿ ಫೋಟೋ ತೆಗೆಯಲು ಮುಂದಾದರು, ಆದರೆ ನಾನು ನಿರಾಕರಿಸಿದೆ. ಅಲ್ಲದೆ ಮೃತದೇಹಗಳನ್ನು ಐಸ್ ಬಾಕ್ಸ್ನಲ್ಲಿ ಇಡಬೇಕಾಗಿದ್ದರೂ ಹಾಗೆ ಮಾಡಿಲ್ಲ,” ಎಂದು ದೂರಿದ್ದಾರೆ.
ಕೆ.ಆರ್. ಆಸ್ಪತ್ರೆ ಶವಾಗಾರದ ಬಳಿ ಉದ್ವಿಗ್ನ ವಾತಾವರಣವುಂಟಾಗಿದೆ.