
ಮೈಸೂರು: ರಾಜ್ಯದ ಆಂತರಿಕ ಸುರಕ್ಷತೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಅಕ್ರಮ ವಲಸಿಗರ ಕುರಿತು ಹಲವು ತಿಂಗಳ ಹಿಂದೆಯೇ ಮಾಹಿತಿ ಲಭ್ಯವಾಗಿದ್ದರೂ, ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
ಮಂಗಳವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಅಕ್ರಮ ಬಾಂಗ್ಲಾದೇಶಿ ವಲಸಿಗರ ಆಗಮನ ಹೆಚ್ಚಾಗುತ್ತಿರುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ನೀತಿಗಳೇ ಕಾರಣ. ಗೃಹ ಸಚಿವರು ಹಾಗೂ ಬ್ರದರ್ ಎನ್ನುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇರುವವರೆಗೂ, ಈ ರೀತಿ ಅಕ್ರಮ ಬಾಂಗ್ಲಾ ವಲಸಿಗರು ರಾಜ್ಯಕ್ಕೆ ಬರುತ್ತಲೇ ಇರುತ್ತಾರೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಅಲ್ಲಿನ ಜನರಿಗೆ 15 ವರ್ಷ ದೀದಿ ಅಧಿಕಾರದಲ್ಲಿ ಬಾಂಗ್ಲಾ ವಲಸಿಗರ ಉಪಟಳ ಇತ್ತು. ಈ ಕಾರಣಕ್ಕೆ ಇದೀಗ ನಡೆದ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಅಧಿಕಾರಕ್ಕೆ ಬಂದರು. ಈಗ ಅಲ್ಲಿನ ಬಾಂಗ್ಲಾ ವಲಸಿಗರು ಬೇರೆ ಕಡೆಗೆ ಕಾಲು ಕೀಳುತ್ತಿದ್ದಾರೆ. ಸುರಕ್ಷಿತ ನೆಲೆ ಎಂದು ಕರ್ನಾಟಕಕ್ಕೆ ದೊಡ್ಡ ಪ್ರಮಾಣದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಬರುತ್ತಿದ್ದಾರೆ ಎಂದು ದೂರಿದರು. .
ಅಕ್ರಮ ಬಾಂಗ್ಲಾ ದೇಶದವರ ಬಗ್ಗೆ ಮಾಹಿತಿ ಕೊಟ್ಟರೆ ನಮ್ಮ ಹಿಂದೂ ಕಾರ್ಯಕರ್ತರ ಮೇಲೆ ದೂರು ಕೊಡುತ್ತಾರೆ. ಅದಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆಯೇ ನೇರ ಕಾರಣ. ಅಂತರಿಕ ಸುರಕ್ಷತೆ ಬಗ್ಗೆ ಗೃಹ ಸಚಿವರಿಗೆ ಮಾಹಿತಿಯೇ ಇಲ್ಲ ಎಂದು ಕಿಡಿ ಕಾರಿದರು.
ಸಿದ್ಧಾರ್ಥ, ಬುದ್ಧ ಟ್ರಸ್ಟ್ ಮಾಡಿಕೊಂಡು ಕೆಐಎಡಿಬಿ ಜಾಗ ಹೊಡೆಯೊಕೆ ನಿಮಗೆ ನೋಂದಣಿ ಬೇಕು. ದೇಶದ ಕೆಲಸ ಮಾಡುವ ಆರ್ಎಸ್ಎಸ್ಗೆ ನೋಂದಣಿ ಅಗತ್ಯವಿಲ್ಲ. ಟ್ರಸ್ಟ್ ಹೆಸರಿನಲ್ಲಿ ಜಾಗ ಲೂಟಿ ಮಾಡಿರುವ ಪ್ರಿಯಾಂಕ್ ಖರ್ಗೆಗೆ ಆರ್ಎಸ್ಎಸ್ ಜಪ ಬಿಟ್ಟು ಬೇರೆ ಏನೂ ಗೊತ್ತಿಲ್ಲ. ಗೃಹ ಸಚಿವರಾಗಿ ರಾಜ್ಯದ ಸುರಕ್ಷತೆಯ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತನಾಡಿದ್ದಾರಾ? ಇಂತಹ ಗೃಹ ಸಚಿವರು ಇರುವ ಕಾರಣಕ್ಕೆ ರಾಜ್ಯಕ್ಕೆ ಅಕ್ರಮ ಬಾಂಗ್ಲಾ ವಲಸಿಗರು ಬರುತ್ತಿದ್ದಾರೆ. ಅಕ್ರಮ ಬಾಂಗ್ಲಾ ವಲಸಿಗರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ತಮ್ಮ ಸರ್ಕಾರ ಅನಿಸಿಬಿಟ್ಟಿದೆ. ಕರ್ನಾಟಕ, ಕೇರಳ, ತೆಲಂಗಾಣ ಈ ಮೂರು ರಾಜ್ಯಗಳು ಅಕ್ರಮ ಬಾಂಗ್ಲಾ ವಲಸಿಗರಿಗೆ ನೆಲೆ ಒದಗಿಸುತ್ತಿವೆ. ಜನರೇ ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು. 200, 300 ಕೂಲಿಗೆ ಅಕ್ರಮ ಬಾಂಗ್ಲಾ ವಲಸಿಗರು ಸಿಗುತ್ತಾರೆ ಎಂದು ಜನ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಬಾರದು ಎಂದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ನಡೆದಿರುವುದರಿಂದ ರಾಜ್ಯಾಧ್ಯಕ್ಷರು ಸೇರಿದಂತೆ ಎಲ್ಲರಿಗೂ ನೋವು, ಬೇಸರ ತರಿಸಿದೆ. ಈ ನೋವಿನಲ್ಲೇ ಅವರು ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸಲು ಹೇಳಿದ್ದಾರೆ. ಈ ಬಗ್ಗೆ ಪಕ್ಷದ ಹಿರಿಯ ಮುಖಂಡರು ಸಲಹೆಗಳನ್ನು ಕೊಟ್ಟಿದ್ದಾರೆ. ಈ ಸಲಹೆಗಳನ್ನು ಆಧರಿಸಿ ತೀರ್ಮಾನ ಮಾಡುತ್ತಾರೆ. ಅದರ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯ ಹೇಳುವುದಿಲ್ಲ ಎಂದರು.