
ಮೈಸೂರು; ನಗರದ ಉದಯಗಿರಿ ಪ್ರದೇಶದಲ್ಲಿರುವ ಸಾತಗಲ್ಲಿ ಬಸ್ ನಿಲ್ದಾಣದ ಮುಂಭಾಗದ ಡೀಪಾಲ್ ಪಬ್ಲಿಕ್ ಸ್ಕೂಲ್ನಲ್ಲಿ ಇಂದು ಡ್ರಗ್ಸ್ ಫ್ರೀ ಮೈಸೂರು’ ಜಾಗೃತಿ ಅಭಿಯಾನ ನಡೆಯಿತು.
ಯುವಜನರನ್ನು ಮಾದಕ ವ್ಯಸನದಿಂದ ದೂರವಿರಿಸಿ, ಆರೋಗ್ಯವಂತ ಹಾಗೂ ಜವಾಬ್ದಾರಿಯುತ ಸಮಾಜ ನಿರ್ಮಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉದಯಗಿರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಎಸ್. ನಾಗೇಶ್ ಅವರು, ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ದುಷ್ಪರಿಣಾಮ, ಕಾನೂನು ಶಿಕ್ಷೆಗಳು ಹಾಗೂ ಜವಾಬ್ದಾರಿಯುತ ನಾಗರಿಕರಾಗಿ ಸಮಾಜದಲ್ಲಿ ಬದುಕುವ ಮಹತ್ವದ ಕುರಿತು ಪ್ರೇರಣಾದಾಯಕ ಹಾಗೂ ಪರಿಣಾಮಕಾರಿ ಮಾರ್ಗದರ್ಶನ ನೀಡಿದರು.
ಡೀಪಾಲ್ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲರಾದ ಜೋಮೆಸ್ ಹಾಗೂ ಸೆಬಾಸ್ಟಿಯನ್ ಅವರು , ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸುವ ಇಂತಹ ಕಾರ್ಯಕ್ರಮಗಳಿಗೆ ಸದಾ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡ್ರಗ್ಸ್ ಫ್ರೀ ಮೈಸೂರು ಅಭಿಯಾನದ ಆಕ್ಟಿವಿಸ್ಟ್ ಹಾಗೂ ಸಾಮಾಜಿಕ ಹೋರಾಟಗಾರ ಹನೀಫ್ ಅಜೀಜ್, ಉದಯಗಿರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಶಿವಕುಮಾರ್, ಡಾ. ಅಯೂಬ್ ಅಹಮದ್ ಜಿ, ಶಿಕ್ಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಮಾದಕ ವ್ಯಸನದ ದುಷ್ಪರಿಣಾಮಗಳನ್ನು ಮನಮುಟ್ಟುವ ರೀತಿಯಲ್ಲಿ ಬಿಂಬಿಸುವ ಕಿರು ನಾಟಕವನ್ನು ಪ್ರದರ್ಶಿಸಿದರು. ನಂತರ ಡೀಪಾಲ್ ಪಬ್ಲಿಕ್ ಸ್ಕೂಲ್ನಿಂದ ಅಜೀಸ್ ಸೇಠ್ ನಗರ ಆರ್ಚ್ವರೆಗೆ ಬ್ಯಾಂಡ್ ವಾದ್ಯದೊಂದಿಗೆ, ಜಾಗೃತಿ ಘೋಷಣೆಗಳು ಹಾಗೂ ಮಾದಕ ವ್ಯಸನ ವಿರೋಧಿ ಫಲಕಗಳನ್ನು ಹಿಡಿದು ಸುಮಾರು 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭವ್ಯ ಜಾಗೃತಿ ರ್ಯಾಲಿಯಲ್ಲಿ ಪಾಲ್ಗೊಂಡರು. ರ್ಯಾಲಿಯು ಸಾರ್ವಜನಿಕರ ಗಮನ ಸೆಳೆದು, ಮಾದಕ ವ್ಯಸನದ ವಿರುದ್ಧ ಪರಿಣಾಮಕಾರಿ ಜಾಗೃತಿ ಸಂದೇಶವನ್ನು ಸಾರಿತು. ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳು “ಡ್ರಗ್ಸ್ ಫ್ರೀ ಮೈಸೂರು ಡ್ರಗ್ಸ್ ಫ್ರೀ ಇಂಡಿಯಾ” ನಿರ್ಮಾಣಕ್ಕೆ ತಮ್ಮಿಂದಾದ ಕೊಡುಗೆ ನೀಡುವ ಹಾಗೂ ಯಾವುದೇ ರೀತಿಯ ಮಾದಕ ವ್ಯಸನದಿಂದ ದೂರವಿರುವ ಸಂಕಲ್ಪ ಮಾಡಿದರು.