
ಮೈಸೂರು; ಇಲ್ಲಿನ ಮಹಾನಗರ ಪಾಲಿಕೆಯ ಆವರಣದಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರೈತರ ಹಕ್ಕೋತ್ತಾಯಗಳನ್ನು ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಹಳ್ಳಿ ಕೆರೆಹುಂಡಿ ಭಾಗ್ಯರಾಜ್, ರಾಜ್ಯ ಸರ್ಕಾರ ಬಿಡದಿ ಟೌನ್ ಶಿಪ್ ಯೋಜನೆಯನ್ನು ರೈತರ ಹಿತದೃಷ್ಟಿಯಿಂದ ಕೈಬಿಡಬೇಕು. ಇದು ರಿಯಲ್ ಎಸ್ಟೇಟ್ ಮತ್ತು ಭೂಮಿ ಖರೀದಿ ಮಾಡಿರುವ ಅನುಕೂಲವಾಗುವ ಹುನ್ನಾರವಾಗಿದೆ. ಬಿಡದಿ ಟೌನ್ ಶಿಪ್ ವ್ಯಾಪ್ತಿಯ ರೈತರ ಭೂಮಿಯನ್ನು ವಶಪಡಿಸಿಕೊಂಡರೆ, ರೈತರ ಹೆಸರಿನ ಮಾಲೀಕತ್ವದಲ್ಲಿ ಅಭಿವೃದ್ಧಿಪಡಿಸಲಿ. ಅದನ್ನು ಬಿಟ್ಟು ಸರ್ಕಾರ ವಶಪಡಿಸಿಕೊಂಡು ಬಂಡವಾಳಶಾಹಿ ಮತ್ತು ಶ್ರೀಮಂತರಿಗೆ ನೀಡುವುದನ್ನು ಕೈ ಬಿಡಲಿ ಎಂದು ಒತ್ತಾಯಿಸಿದರು.
ಮೈಸೂರು- ಚಾಮರಾಜನಗರ ಜಿಲ್ಲೆಯನ್ನು ತಕ್ಷಣ ಬರ ಪೀಡಿತ ಎಂದು ಘೋಷಿಸಿ, ಜಾನುವಾರುಗಳಿಗೆ ಮೇವು ಬ್ಯಾಂಕುಗಳನ್ನು ಆರಂಭಿಸಬೇಕು. ಬರಪೀಡಿತ ಪ್ರದೇಶದ ರೈತರ ಕೃಷಿ ಸಾಲ ಮನ್ನಾ ಮಾಡಬೇಕು.
ಬಣ್ಣಾರಿ ಸಕ್ಕರೆ ಕಾರ್ಖಾನೆಯು ರಾಜ್ಯ ಸರ್ಕಾರದ ಆದೇಶದ 50 ರೂಪಾಯಿ ಲಾಭಾಂಶ ಹಣವನ್ನು ನೀಡುವವರೆಗೆ ಕಾರ್ಖಾನೆ ಪ್ರಾರಂಭ ಮಾಡಲು ಅನುಮತಿ ನೀಡಬಾರದು. ಕಾರ್ಖಾನೆ ಮುಂದೆ ಎಪಿಎಂಸಿ ಮುಖಾಂತರ ತೂಕದ ಯಂತ್ರ ಅಳವಡಿಸಬೇಕು. ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿಯಾಗಬೇಕು. ಉತ್ತರ ದಕ್ಷಿಣ ಎಂಬ ತಾರತಮ್ಯ ಮಾಡದೆ ಕಟಾವು ಸಾಗಾಣಿಕೆಯನ್ನು ಕಾರ್ಖಾನೆ ಅವರೇ ಬರಿಸಬೇಕು. ಕಬ್ಬು ಖರೀದಿ ಮಂಡಳಿಯನ್ನು ಪುನರ್ ರಚಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ 19 ಜಿಲ್ಲೆಗಳ ವಿದ್ಯುತ್ತನ್ನು ಟಾಟಾ ಪವರ್ ಕಂಪೆನಿಗೆ ನೀಡುವುದನ್ನು ಕೈ ಬಿಟ್ಟು, ರಾಜ್ಯದಲ್ಲಿ ಯಾವುದೇ ವಿದ್ಯುತ್ ಖಾಸಗಿಕರಣ ಇಲ್ಲ ಎಂಬ ನಿಲುವನ್ನು ಸರ್ಕಾರ ಘೋಷಣೆ ಮಾಡಬೇಕು.
ಈ ವಿಚಾರಗಳ ಬಗ್ಗೆ ಸರ್ಕಾರ ರೈತಪರ ಸೂಕ್ತ ನಿಲುವು ಪ್ರಕಟಿಸಿದಿದ್ದರೆ, ಅಹೋ ರಾತ್ರಿ ಧರಣಿಯನ್ನು ಹಮ್ಮಿಕೊಂಡು ಚಳುವಳಿ ಪ್ರಾರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಕ್ಷಣವೇ ರೈತ ಮುಖಂಡರ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು. ಇಂದಿನ ನಿಯೋಗದಲ್ಲಿ ಸಂಘದ ರಾಜ್ಯ ಖಜಾಂಚಿ ಕೆರೆಹುಂಡಿ ರಾಜಣ್ಣ, ಜಿಲ್ಲಾಧ್ಯಕ್ಷ ಒಳಗೆರೆ ಗಣೇಶ್, ಪ್ರಕಾಶ್ ಗಾಂಧಿ, ಮುದ್ದಳ್ಳಿಮಧು, ಅಂಡುವಿನಹಳ್ಳಿ ಜಗದೀಶ್, ಮಹೇಶ್, ದೇವಣ್ಣ, ಎಚ್.ಗುಂಡ್ಲ, ಜಗದೀಶ್, ಸೋಮಣ್ಣ , ನಂದಿಗುAದ ಸಿದ್ದಪ್ಪ, ಮಹದೇವಸ್ವಾಮಿ ಮುಂತಾದವರು ಹಾಜರಿದ್ದರು.