
*ಪತ್ರಿಕಾ ದಿನಾಚರಣೆ ಅಂಗವಾಗಿ ಉಚಿತ ಕನ್ನಡ ದಿನಪತ್ರಿಕೆ ವಿತರಣೆ
ಮೈಸೂರು: ಮಯೂರ ಕನ್ನಡ ಯುವಕರ ಬಳಗದ ವತಿಯಿಂದ ಹಳೆ ಸಂತೆಪೇಟೆಯಲ್ಲಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕನ್ನಡ ದಿನಪತ್ರಿಕೆಗಳನ್ನು ಉಚಿತವಾಗಿ ವಿತರಿಸಿ ಪತ್ರಿಕಾ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಲು ಸಲಹೆ ನೀಡಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿದಿನ ಪೈಪೋಟಿ ಹೆಚ್ಚುತ್ತಿದೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ,ವ್ಯವಹಾರ ಜ್ಞಾನ ವೃದ್ಧಿಸಿಕೊಳ್ಳಲು ದಿನಪತ್ರಿಕೆಯನ್ನು ಓದುವ ದಿನಚರಿಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಹೇಳಿದರು
ನಂತರ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಪತ್ರಕರ್ತರಿಗೆ ಬಿಡುವು ಎನ್ನುವುದಿಲ್ಲ. ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಾರೆ. ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಸಹ ಅವರಲ್ಲಿ ಸಮಯ ಇರುವುದಿಲ್ಲ. ಒತ್ತಡದ ನಡುವೆಯೇ ಕುಟುಂಬ ಸದಸ್ಯರೆಲ್ಲರೂ ಒಂದೆಡೆ ಸೇರುವ ಹಾಗೆ ಕಾರ್ಯಕ್ರಮ ಏರ್ಪಡಿಸಲು ಪತ್ರಕರ್ತರ ಸಂಘ ಮುಂದಾಗಬೇಕು ಎಂದರು.
ಹಿರಿಯ ಸಮಾಜ ಸೇವಕ ರಘುರಾಮ್ ವಾಜಪೇಯಿ ಮಾತನಾಡಿ, ಮೈಸೂರು ನಿಜವಾದ ಅರ್ಥದಲ್ಲಿ ಪತ್ರಿಕೆಗಳ ತವರೂರು. ಮಂಗಳೂರು ಸಮಾಚಾರ ಎಂಬುದು ಕ್ರಿಶ್ಚಿಯನ್ ಮಿಶಿನರಿಗಳ ಮಾಸಿಕ ಸಂಚಿಕೆ ಮೊದಲಿಗಾಗಿ ಹೊರಹೊಮ್ಮಿದ್ದರೂ ಕೂಡ, ಸಾರ್ವಜನಿಕವಾಗಿ ಪತ್ರಿಕಾ ಮಾಧ್ಯಮ ಮುದ್ರಣ ಹೊರಹೊಮ್ಮಿದ್ದು ಮೈಸೂರಿನಲ್ಲಿಯೇ. ಹಾಗಾಗಿ ಪತ್ರಿಕಾ ಮಾಧ್ಯಮಕ್ಕೆ ಮೈಸೂರಿನಲ್ಲಿ ವಿಶಿಷ್ಟ ಸ್ಥಾನವಿದೆ, ಅದರಲ್ಲೂ ತಾತಯ್ಯನವರನ್ನು ಮಹಾತ್ಮ ಗಾಂಧಿಯವರು ಪತ್ರಿಕರಂಗದ ಭೀಷ್ಮ ಎಂದು ಕರೆದಿದ್ದರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆ.ಆರ್.ಬ್ಯಾಂಕ್ ಅಧ್ಯಕ್ಷ ಬಸವರಾಜ್, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ ರಾಘವೇಂದ್ರ, ಎಸ್. ಎನ್.ರಾಜೇಶ್, ಹಿರಿಯ ಪತ್ರಿಕಾ ವಿಚಾರಕರಾದ ರಮಾಬಾಯಿ, ರಾಕೇಶ್, ಹರೀಶ್ ನಾಯ್ಡು ಹಾಗೂ ಇನ್ನಿತರರು ಹಾಜರಿದ್ದರು