
ಮೈಸೂರು: ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳಿಂದ ನೊಂದ ಮಹಿಳೆಯರಿಗೆ ನೆರವಾಗಲು ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ 24ಘಿ7 ಗಂಟೆಯೂ ಉಚಿತ ಕಾನೂನು ಸಲಹೆ ಮತ್ತು ಆಪ್ತಸಮಾಲೋಚನೆ ನೀಡಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಹೇಳಿದರು.
ಮಂಗಳವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಅಪರ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಸಖಿ ಒನ್ ಸ್ಟಾಪ್ ಸೆಂಟರ್ ಮೂಲಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಒಂದೇ ಸೂರಿನಡಿ ಉಚಿತ ಆಪ್ತ ಸಮಾಲೋಚನೆ, ಪೊಲೀಸ್ ನೆರವು, ಕಾನೂನು ನೆರವು, ವೈದ್ಯಕೀಯ ಸೇವೆ ಹಾಗೂ 5 ದಿನಗಳ ತಾತ್ಕಾಲಿಕ ಆಶ್ರಯ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಿಂದ ಬಂದು ನಗರದ ಕಾರ್ಖಾನೆ, ಹೋಟೆಲ್, ಆಸ್ಪತ್ರೆ ಹಾಗೂ ಗಾರ್ಮೆಂಟ್ಸ್ಗಳಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷಿತ ವಾಸ್ತವ್ಯಕ್ಕಾಗಿ ಮೈಸೂರು ಜಿಲ್ಲೆಯ ಬೆಳವಾಡಿ ಹಾಗೂ ಹೂಟಗಳ್ಳಿಯಲ್ಲಿ ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಉದ್ಯೋಗಸ್ಥ ತಾಯಂದಿರ 6 ತಿಂಗಳಿAದ 6 ವರ್ಷದೊಳಗಿನ ಮಕ್ಕಳ ಪೋಷಣೆ ಮತ್ತು ಸುರಕ್ಷತೆಗಾಗಿ ಜಿಲ್ಲೆಯಲ್ಲಿ 4 ಶಿಶು ಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳು ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ಪಂಚಾಯತ್, ನಂಜನಗೂಡಿನ ಸ್ತ್ರೀಶಕ್ತಿ ಭವನ ಹಾಗೂ ಹುಣಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳಿಗೆ ಪೌಷ್ಟಿಕ ಆಹಾರ, ಪ್ರಾಥಮಿಕ ಶಿಕ್ಷಣ ಮತ್ತು ಬೌದ್ಧಿಕ ಬೆಳವಣಿಗೆಯ ಚಟುವಟಿಕೆಗಳನ್ನು ಒದಗಿಸುತ್ತಿವೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯ ಸುಧಾರಣೆಗಾಗಿ ಆರ್ಥಿಕ ನೆರವು ನೀಡುವ ಮೂಲಕ ಈ ಯೋಜನೆಯಡಿ ನೇರ ನಗದು ವರ್ಗಾವಣೆ ಮೂಲಕ ಆಧಾರ್ ಲಿಂಕ್ ಖಾತೆಗೆ ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದರು.
ಹುಣಸೂರಿಗೆ ಹೆಚ್ಚುವರಿ ಅಕ್ಕಪಡೆ ಮತ್ತು ನಂಜನಗೂಡಿಗೆ ಶಕ್ತಿ ಸದನದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಜಿಲ್ಲೆಯಲ್ಲಿ ಸದ್ಯ 2 ಅಕ್ಕಪಡೆ ತಾಲ್ಲೂಕು ವಿಭಾಗದಲ್ಲಿ 1, ನಗರ ವಿಭಾಗದಲ್ಲಿ 1 ತಂಡವನ್ನು ನಿಯೋಜಿಸಲಾಗಿದ್ದು, ಬಸ್ ನಿಲ್ದಾಣ, ಕಾಲೇಜು, ಜಾತ್ರೆ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುತ್ತಿವೆ. ಪ್ರಸ್ತುತ ಹುಣಸೂರು ತಾಲ್ಲೂಕಿಗೆ ಮತ್ತೊಂದು ಹೆಚ್ಚುವರಿ ಅಕ್ಕಪಡೆ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗೆ ಪುನರ್ವಸತಿ ಕಲ್ಪಿಸುವ ಶಕ್ತಿ ಸದನ ಕೇಂದ್ರವು ಸದ್ಯ ಮೈಸೂರಿನಲ್ಲಿ ಇಲ್ಲದಿರುವುದರಿಂದ, ಮಂಡ್ಯ ಜಿಲ್ಲೆಯ ಪಾಂಡವಪುರದ ಜ್ಞಾನ ವಿಕಾಸ ಎಜುಕೇಷನ್ ಟ್ರಸ್ಟ್ನ ಕೇಂದ್ರವನ್ನು ಮೈಸೂರಿಗೆ ಸ್ಥಳಾಂತರಿಸಲು ಜಿಲ್ಲಾ ಸಮಿತಿ ಅನುಮೋದನೆ ಪಡೆದು, ಪ್ರಧಾನ ಕಛೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರೊಂದಿಗೆ ನಂಜನಗೂಡು ತಾಲ್ಲೂಕಿಗೂ ಹೊಸದಾಗಿ ಮತ್ತೊಂದು ಶಕ್ತಿ ಸದನ ಕೇಂದ್ರ ಮಂಜೂರು ಮಾಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ. ಆರ್, ಜಿಲ್ಲಾ ನಿರೂಪಣಾಧಿಕಾರಿ ವಿಜಯಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಶ್ಮಿ .ಎಸ್, ಅಪರ ಪೊಲೀಸ್ ಆಯುಕ್ತ ಎಲ್. ನಾಗೇಶ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿರಾಜ್ ಉಪಸ್ಥಿತರಿದ್ದರು.