
ಮೈಸೂರು: ಈ ಬಾರಿ ನಡೆಯಲಿರುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಇನ್ನೂ ಬಂದಿಲ್ಲ. ಈ ಬಗ್ಗೆ ಎಲ್ಲಾ ಸಾಧಕ-ಬಾಧಕಗಳನ್ನು ನೋಡಿಕೊಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀರ್ಮಾನ ಕೈಗೊಳ್ಳುತ್ತಾರೆ ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ದಸರಾದಲ್ಲಿ ಕಂಬಳ ನಡೆಸುವ ಬಗ್ಗೆ ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ. ಸದ್ಯಕ್ಕೆ ದಸರಾದಲ್ಲಿ ಪರಿಸರಕ್ಕೆ ತೊಂದರೆ ಮಾಡಿ, ಕಂಬಳ ನಡೆಸಬೇಕೆಂಬ ತೀರ್ಮಾನಕ್ಕೆ ಸರ್ಕಾರ ಬಂದಿಲ್ಲ. ಎಲ್ಲಾ ಸಾಧಕ-ಬಾಧಕಗಳನ್ನು ಮುಖ್ಯಮಂತ್ರಿಗಳು ಪರಿಶೀಲಿಸುತ್ತಾರೆ. ಅವರೇ ಅಂತಿಮ ತೀರ್ಮಾನ ಮಾಡುತ್ತಾರೆ. ಕಂಬಳ ಮಾಡಬೇಕೆಂಬ ತೀರ್ಮಾನ ಸದ್ಯಕ್ಕೆ ಆಗಿಲ್ಲ. ಆದರೆ ಕಂಬಳ ಕೂಡ ನಮ್ಮ ಸಂಸ್ಕöÈತಿಯ ಭಾಗ. ಅದನ್ನು ಮೈಸೂರು ಭಾಗದಲ್ಲಿ ಪ್ರಚಾರ ಮಾಡಬೇಕೆಂಬ ಉದ್ದೇಶದಿಂದ ಕಂಬಳ ನಡೆಸಲು ಚಿಂತನೆ ಮಾಡಿದ್ದೇವೆ ಅಷ್ಟೇ ಎಂದು ಹೇಳಿದರು.
ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಬಾರಿ ವಿಐಪಿಗಳಿಗೆ ಸಮಯ ನಿಗದಿ ಮಾಡಲಾಗಿದೆ. ಬೆಳಗ್ಗೆ 9 ಗಂಟೆ 30 ನಿಮಿಷದ ಒಳಗೆ ವಿಐಪಿಗಳು ದರ್ಶನ ಮಾಡಬೇಕು. ಯಾವಾಗ ಬೇಕಾದರೂ ದರ್ಶನಕ್ಕೆ ಬರುವಂತಿಲ್ಲ. ಅವರ ವಾಹನಗಳನ್ನು ಮಹಿಷಾಸುರ ಪ್ರತಿಮೆಯ ಬಳಿ ಪಾರ್ಕ್ ಮಾಡಿ, ಅಲ್ಲಿಂದ ದೇವಾಲಯದ ವಾಹನದಲ್ಲಿ ಬರಬೇಕು ಎಂದು ತಿಳಿಸಿದರು.
ವಿಐಪಿ ದರ್ಶನಕ್ಕೆ 2,000 ರೂಪಾಯಿ ಟಿಕೆಟ್ ನಿಗದಿ ಮಾಡಿರುವುದು ಸಾರ್ವಜನಿಕರ ಅನುಕೂಲಕ್ಕಾಗಿ, ಹೀಗಾಗಿಯೇ 300 ರೂಪಾಯಿ ಟಿಕೆಟ್ ಅನ್ನು ರದ್ದು ಮಾಡಲಾಗಿದೆ. ಭಕ್ತಾದಿಗಳ ಅನುಕೂಲಕ್ಕಾಗಿ ಉಚಿತ ಸಾರಿಗೆ, ಶೌಚಾಲಯ ಸೇರಿದಂತೆ ಎಲ್ಲಾ ರೀತಿಯ ಅನುಕೂಲಗಳನ್ನು ಕಲ್ಪಿಸಲಾಗಿದೆ ಎಂದರು.
ಸೂಟ್ಕೇಸ್ ಸಂಸ್ಕöÈತಿ ನಮ್ಮಲಿಲ್ಲ: ಸಂಪುಟ ವಿಸ್ತರಣೆ ವಿಷಯದಲ್ಲಿ ಸೂಟ್ಕೇಸ್ ಸಂಸ್ಕöÈತಿ ಇದೆ ಎಂದು ವಿಪಕ್ಷದವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಯತೀಂದ್ರ ಅವರು, ಇದು ನಮ್ಮ ಪಕ್ಷದಲ್ಲಿಲ್ಲ. ಸೂಟ್ಕೇಸ್ ಕೊಟ್ಟರೆ ಮಂತ್ರಿ ಸ್ಥಾನ ಕೊಡುತ್ತಾರೆ ಎಂಬುದು ಸುಳ್ಳು. ಆರೋಪ ಮಾಡುವ ವಿಪಕ್ಷಗಳಲ್ಲೇ ಸೂಟ್ಕೇಸ್ ಸಂಸ್ಕöÈತಿ ಇದೆ ಎಂದು ತಿರುಗೇಟು ನೀಡಿದರು.
ಸಂಪುಟ ವಿಸ್ತರಣೆ ವಿಚಾರ ನನಗೆ ಗೊತ್ತಿಲ್ಲ. ಅದರ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನು ಕೇಳಿ ಎಂದರು.