
ಪಿರಿಯಾಪಟ್ಟಣ: ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಅದರ ನೆನಪಿಗಾಗಿ ಹರ್ ಘರ್ ತಿರಂಗಾ ಅಭಿಯಾನ ನಡೆಸಲಾಗುತ್ತಿದೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ವಿ.ರಾಜೇಂದ್ರ ತಿಳಿಸಿದರು.
ಪಟ್ಟಣದ ಶ್ರೀ ಮಸಣಿಕಮ್ಮ ದೇವಾಲಯದ ಆವರಣದಲ್ಲಿ ಗುರುವಾರ ತಾಲ್ಲೂಕು ಬಿಜೆಪಿ ಘಟಕ ಹಾಗೂ ಯುವ ಮೋರ್ಚಾ ವತಿಯಿಂದ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು ರಾಷ್ಟ್ರಧ್ವಜ ದೇಶದ ಐಕ್ಯತೆ, ಸೌಹಾರ್ದತೆ ಹಾಗೂ ಹೆಮ್ಮೆಯ ಸಂಕೇತ. ಪ್ರತಿಯೊಬ್ಬರು ರಾಷ್ಟ್ರ ಧ್ವಜ, ರಾಷ್ಟ್ರ ಗೀತೆ ಸೇರಿದಂತೆ ರಾಷ್ಟ್ರೀಯ ಲಾಂಛನಗಳನ್ನು ಗೌರವಿಸಬೇಕು. ಎಲ್ಲಕ್ಕಿಂತ ದೇಶ ಮೊದಲು ಎನ್ನುವುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಸಾವಿರಾರು ಜನರು ಹೋರಾಟ, ತ್ಯಾಗ ಮಾಡಿ ಗಳಿಸಿ ಕೊಟ್ಟಿರುವ ಸ್ವಾತಂತ್ರ್ಯವನ್ನು ಆನಂದಿಸುವ ಮೊದಲು ಪ್ರಾತಃಸ್ಮರಣೀಯ ಎಲ್ಲರನ್ನು ಸ್ಮರಿಸುವುದು ನಮ್ನೆಲ್ಲರ ಕರ್ತವ್ಯವಾಗಿದೆ ಆದ್ದರಿಂದ ಪ್ರತಿ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಟ ಮಾಡಬೇಕು. ಸ್ವಾತಂತ್ರ್ಯದ ಇತಿಹಾಸವನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಬ್ರಿಟಿಷರ ವಿರುದ್ಧ ನಡೆದ ಹೋರಾಟಗಳು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ಹಾಗಾಗಿ ಪಕ್ಷ ಬೇಧ ಮರೆತು ಪ್ರತಿಯೊಬ್ಬರು ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿ ರಾಷ್ಟ್ರದ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದರು.
ಮುಖಂಡ ಆರ್.ಟಿ.ಸತೀಶ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ನೇ ವರ್ಷದ ಸವಿನೆನಪಿಗಾಗಿ ಮನೆ ಮನೆಗೆ ತಿರಂಗಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶ ನಿವಾಸಿಗಳಿಗೆ ಹರ್ ಘರ್ ತಿರಂಗಾ ಆಚರಿಸುವಂತೆ ಸೂಚನೆ ನೀಡಿದ್ದರು ಆದ್ದರಿಂದ ಸ್ವಾತಂತ್ರ್ಯೋತ್ಸವದ ಸವಿ ನೆನಪಿನಲ್ಲಿ ಆ.12 ರಿಂದ 15ರ ವರೆಗೆ ಪ್ರತಿ ಮನೆಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವ ಮೂಲಕ ರಾಷ್ಟ್ರಧ್ವಜದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರಧ್ವಜ ಹಿಡಿದು, ದೇಶಾಭಿಮಾನದ ಘೋಷಣೆಗಳನ್ನು ಕೂಗುತ್ತಾ ಸಾಗಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಚನ್ನಬಸವರಾಜು, ಹೆಚ್.ಎಸ್.ರವಿ ಮುಖಂಡರಾದ ಲೋಕಪಾಲಯ್ಯ, ಬೂತನಹಳ್ಳಿ ಪಿ.ಜೆ.ರವಿ, ವಿಶ್ವನಾಥ್, ಜಗಪಾಲ್, ವೀರಭದ್ರ, ಮಾಗಳಿ ಸ್ವಾಮಿ, ದೇವೇಂದ್ರ ಸೇರಿದಂತೆ ಇತರರು ಇದ್ದರು.