
ನಂಜನಗೂಡು.
ಹೊಸ ಕಡಜಟ್ಟಿ ಗ್ರಾಮದಲ್ಲಿ ತೀವ್ರ ಹಲ್ಲೆಗೊಳಗಾಗಿ ಕೊಲೆಯಾಗಿದ್ದ ದಲಿತ ಮಹಿಳೆ ಮಹದೇವಮ್ಮ ರವರನ್ನು ಕೊಲೆ ಮಾಡಿದ ಆರೋಪಿ ನವೀನ್ ನನ್ನು ವಶಕ್ಕೆ ಪಡೆಯುವಲ್ಲಿ ಹುಲ್ಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಸ ಕಡಜಟ್ಟಿ ಗ್ರಾಮದ ಶಂಕರ್ ರವರ ಪುತ್ರ ಸಿದ್ದರಾಮಯ್ಯ ಅಲಿಯಾಸ್ ನವೀನ (40) ಬಂದಿತ ಆರೋಪಿ.
ಸೆ.6 ರಂದು ಹೊಸ ಕಡಜಟ್ಟಿ ಗ್ರಾಮದಲ್ಲಿ ದಲಿತ ಮಹಿಳೆ ಮಹದೇವಮ್ಮ ರವರ ಮೇಲೆ ಹಣಕಾಸಿನ ವಿಚಾರವಾಗಿ ಜಗಳ ತೆಗೆದು ತೀವ್ರವಾಗಿ ಹಲ್ಲೆ ನಡೆಸಿದ್ದ, ಸೆ.7 ರಂದು ಮಹದೇವಮ್ಮ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಆರೋಪಿ ನವೀನ್ ಹಣದ ಆಮೀಷ ಹೊಡ್ಡಿ ಪ್ರಕರಣವನ್ನು ಮುಚ್ಚಿ ಹಾಕಲು, ಪ್ರಯತ್ನಪಟ್ಟಿದ್ದ ಎನ್ನಲಾಗಿದ್ದು, ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿಯೇ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿತ್ತು ಎನ್ನಲಾಗಿದೆ, ಈ ಸಂಬಂಧ ಬಾಬು ಜಗಜೀವನರಾಂ ಸಂಘಟನೆಯ ಮುಖ್ಯಸ್ಥರು ಮತ್ತು ಗ್ರಾಮಸ್ಥರು ಶವವನ್ನು ನಾಲ್ಕು ದಿನಗಳ ಕಾಲ ಅಂತ್ಯಕ್ರಿಯೆ ನಡೆಸದೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದರು. ಪರಿಣಾಮವಾಗಿ ಹುಲ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಸೆ.14ರ ಸೋಮವಾರ ಆರೋಪಿ ನವೀನ್ ಮೈಸೂರಿನ ಸಬರ್ಬ್ ಬಸ್ ನಿಲ್ದಾಣದಲ್ಲಿದ್ದ ವೇಳೆ ನಂಜನಗೂಡು ಉಪ ವಿಭಾಗದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.