
ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಿ
ಮೈಸೂರು: ರಕ್ತದಾನ ಮಾಡುವುದರಿಂದ ಆರೋಗ್ಯ ಮತ್ತಷ್ಟು ಉತ್ತಮವಾಗುತ್ತದೆ ಎಂದು ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಹೇಳಿದರು
ಬುಧವಾರ ಮೈಸೂರು ನಗರದ ನ್ಯೂ ಸಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರಕ್ಕೆ ಭೇಟಿ ನೀಡಿ, ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಯುವಕರಲ್ಲಿ ರಕ್ತದಾನ ಜಾಗೃತಿ ಮೂಡಿಸಿದರು. ಬಳಿಕ ಮಾತನಾಡಿದ ಅವರು,
ದಾನಗಳಲ್ಲಿ ಶ್ರೇಷ್ಠ ದಾನ ಎಂದರೆ ಅದು ರಕ್ತದಾನ. ರಕ್ತದಾನಕ್ಕೆ ಯಾರು ಬೆಲೆ ಕಟ್ಟಲು ಸಾಧ್ಯವಿಲ್ಲ. ರಕ್ತದಾನ ಮಾಡಿದರೆ ಆರೋಗ್ಯ ಲಾಭಗಳಿವೆ. ಹಾಗಾಗಿ ಯುವಕರು ಹಾಗೂ ಆರೋಗ್ಯವಂತರು ಹೆಚ್ಚಾಗಿ ರಕ್ತದಾನ ಮಾಡುವ ಮೂಲಕ ಇತರರ ಪ್ರಾಣವನ್ನು ಕಾಪಾಡಬೇಕು ಎಂದು ತಿಳಿಸಿದರು.
ಕೆಲವು ಸಂದರ್ಭದಲ್ಲಿ ಎಷ್ಟೇ ಕೋಟಿ ಇದ್ದರೂ ಸಹ ನಮಗೆ ಬೇಕಾದ ರಕ್ತ ಸಿಗುವುದಿಲ್ಲ. ಆ ಕಾರಣ ರಕ್ತವು ಬಹಳ ಅಮೂಲ್ಯ. ಇತ್ತೀಚಿನ ದಿನಗಳಲ್ಲಿ ಕೆಲ ಯುವಕರು ಮಧ್ಯ ಸೇವನೆ ಸೇರಿದಂತೆ ಅನೇಕ ದುಷ್ಟಟಗಳಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಚಟಗಳಿಗೆ ಬಲಿಯಾಗದೆ ಆರೋಗ್ಯವಂತರಾಗಿ ಬಾಳಬೇಕು. ನಾನು ಸಹ ಈಗಾಗಲೇ 20 ಬಾರಿ ರಕ್ತದಾನ ಮಾಡಿದ್ದೇನೆ. ಪ್ರತಿ ವರ್ಷ 3 ಬಾರಿ ರಕ್ತದಾನ ಮಾಡುತ್ತೇನೆ ಎಂದು ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು
ಇದೇ ಸಂದರ್ಭದಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುತ್ತಣ್ಣ, ಪನಿಶ್ ಆಸ್ಪತ್ರೆಯ ನಿರ್ದೇಶಕ ಲೋಕೇಶ್, ಸುದರ್ಶನ್, ಚಿಕ್ಕಣ್ಣ, ಸುರೇಶ್, ಎಸ್ ಎನ್ ರಾಜೇಶ್, ಹಾಗೂ ಇನ್ನಿತರರು ಹಾಜರಿದ್ದರು