
ಮೈಸೂರು: ನಗರದ ದಟ್ಟಗಳ್ಳಿ ಪ್ರದೇಶದಲ್ಲಿರುವ ಒಂದು ಪಬ್ನಲ್ಲಿ ಸಂಭವಿಸಿದ ಅಗ್ನಿ ದುರಂತದ ಘಟನೆಯ ನಂತರ ಮೈಸೂರು ಮಹಾನಗರ ಪಾಲಿಕೆ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಏಕಾಏಕಿ ಅನೇಕ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳನ್ನು ಪರಿಶೀಲನೆ ನಡೆಸಿ, ಕೆಲವು ಸಂಸ್ಥೆಗಳನ್ನು ತಕ್ಷಣವೇ ಮುಚ್ಚಲು ಸೂಚಿಸಿರುವುದು ಉದ್ಯಮಿಗಳಿಗೆ ತೀವ್ರ ಸಂಕಷ್ಟವನ್ನು ಉಂಟುಮಾಡಿದೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೈಸೂರು ನಗರ ತನ್ನ ಸಾಂಸ್ಕೃತಿಕ ಪರಂಪರೆ ಮತ್ತು ಪ್ರವಾಸೋದ್ಯಮಕ್ಕಾಗಿ ದೇಶ-ವಿದೇಶಗಳಲ್ಲಿಯೇ ಪ್ರಸಿದ್ದಿ ಪಡೆದಿದೆ. ಇಲ್ಲಿನ ಸಾವಿರಾರು ವ್ಯಾಪಾರಿಗಳು, ವಿಶೇಷವಾಗಿ ಹೋಟೆಲ್ ಮತ್ತು ಆತಿಥ್ಯ ಕ್ಷೇತ್ರದ ಉದ್ಯಮಿಗಳು, ಸರ್ಕಾರಕ್ಕೆ ನಿಯಮಿತವಾಗಿ ತೆರಿಗೆ ಪಾವತಿಸುವ ಮೂಲಕ ನಗರದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳ ನೀಡುತ್ತಿದ್ದಾರೆ. ಆದರೆ, ಮೈಸೂರಿನ ದಟ್ಟಗಳ್ಳಿಯಲ್ಲಿ ನಡೆದ ಅಗ್ನಿ ದುರಂತದ ದುರ್ಘಟನೆ ಮೈಸೂರಿನ ಪ್ರತಿಷ್ಠೆಗೂ ಧಕ್ಕೆಯನ್ನುಂಟು ಮಾಡಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡುವುದು ಅತ್ಯಗತ್ಯ ಎಂಬುದನ್ನು ಒಪ್ಪುತ್ತೇವೆ ಎಂದು ಹೇಳಿದ್ದಾರೆ.
ಮಾರ್ಚ್ ತಿಂಗಳಲ್ಲಿಯೇ ಅನೇಕ ವ್ಯಾಪಾರಿಗಳು ತಮ್ಮ ವ್ಯಾಪಾರ ಪರವಾನಗಿಗಳನ್ನು ನವೀಕರಿಸಿಕೊಂಡಿದ್ದು, ಯಾವುದೇ ಮುಂಚಿತ ಸೂಚನೆ ಅಥವಾ ಕಾಲಾವಕಾಶ ನೀಡದೆ ವ್ಯಾಪಾರವನ್ನು ಸ್ಥಗಿತಗೊಳಿಸಲು ಸೂಚಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ವ್ಯಾಪಾರಿಯ ಕರ್ತವ್ಯವೇ ಆಗಿದೆ. ಆದರೆ, ಕಂಡುಬಂದಿರುವ ಲೋಪದೋಷಗಳನ್ನು ಸರಿಪಡಿಸಲು ಕನಿಷ್ಠ ಒಂದು ತಿಂಗಳ ಕಾಲಾವಕಾಶವನ್ನು ನೀಡಿದರೆ ವ್ಯಾಪಾರಸ್ಥರು ಅಗತ್ಯ ಕ್ರಮಗಳನ್ನು ಕೈಗೊಂಡು ಎಲ್ಲಾ ನಿಯಮಗಳನ್ನು ಅನುಸರಿಸಲು ಸಾಧ್ಯವಾಗುತ್ತದೆ. ಇದರಿಂದ ಸಾರ್ವಜನಿಕರ ಸುರಕ್ಷತೆಗೂ *ಧಕ್ಕೆಯಾಗುವುದಿಲ್ಲ ಹಾಗೂ ಉದ್ಯಮಿಗಳಿಗೂ ಅನಗತ್ಯ ತೊಂದರೆ ಉಂಟಾಗುವುದಿಲ್ಲ. ಆದ್ದರಿಂದ, ಜಿಲ್ಲೆಯ ಎಲ್ಲಾ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಹಾಗೂ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಿಗಳೊಂದಿಗೆ ಸಭೆಯನ್ನು ಕರೆಯಿಸಿ, ಪಾಲಿಸಬೇಕಾದ ನಿಯಮಗಳು ಹಾಗೂ ಸುರಕ್ಷತಾ ಮಾನದಂಡಗಳ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.