
ಮೈಸೂರು; ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಅಂತರರಾಷ್ಟ್ರೀಯ ಯೋಗ ದಿನವನ್ನು ಇಂದು ಮೈಸೂರು ರೈಲ್ವೆ ಸಮುದಾಯ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಮಾತನಾಡಿ, ಆರೋಗ್ಯಕರ ಮತ್ತು ಸಮತೋಲನಯುತ ಸಮಾಜ ನಿರ್ಮಾಣದಲ್ಲಿ ಯೋಗದ ಮಹತ್ವವನ್ನು ತಿಳಿದರು. ಯೋಗವು ದೈಹಿಕ ಆರೋಗ್ಯ, ಮಾನಸಿಕ ಸಮತೋಲನ ಮತ್ತು ಆಂತರಿಕ ಶಾಂತಿಯನ್ನು ಉತ್ತೇಜಿಸುವ ಸಮಗ್ರ ವಿಧಾನವಾಗಿದ್ದು, ಸಮತೋಲನಯುತ ಹಾಗೂ ಅರ್ಥಪೂರ್ಣ ಜೀವನಶೈಲಿಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಇಂದಿನ ವೇಗದ ಮತ್ತು ಒತ್ತಡಭರಿತ ಜೀವನಶೈಲಿಯನ್ನು ಗಮನದಲ್ಲಿಟ್ಟುಕೊಂಡು, ಉತ್ತಮ ಆರೋಗ್ಯ, ಮಾನಸಿಕ ಶಾಂತಿ ಮತ್ತು ಸಮಗ್ರ ಕಲ್ಯಾಣವನ್ನು ಸಾಧಿಸಲು ಯೋಗವನ್ನು ದಿನನಿತ್ಯದ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳುವಂತೆ ಭಾಗವಹಿಸಿದವರನ್ನು ಪ್ರೇರೇಪಿಸಿದರು.
ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಕಳೆದ 23 ವರ್ಷಗಳಿಂದ ಯೋಗ ಪ್ರಚಾರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಯೋಗ ತರಬೇತುದಾರ ರಘು ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮೈಸೂರು ವಿಭಾಗದ ಪ್ರಮುಖ ರೈಲು ನಿಲ್ದಾಣಗಳಲ್ಲಿಯೂ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.