
ಮೈಸೂರು; ಸಾಮಾಜಿಕ, ಆರ್ಥಿಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಅವಶ್ಯಕ ಎಂದು ಚಾಮರಾಜನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಎಂ. ಆರ್. ಗಂಗಾಧರ್ ಹೇಳಿದರು. ಸೋಮವಾರ ಮೈಸೂರಿನ ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ 2026-27ರ ದೀಕ್ಷಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ, ಆರ್ಥಿಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಅವಶ್ಯಕ ಎಂದು ತಿಳಿಸಿದರು. ದೀಕ್ಷಾರಂಭವು ಜ್ಞಾನದ ಆರಂಭ, ಜೊತೆಗೆ ಕಾಲೇಜನ್ನು ಪರಿಚಯಿಸುವುದು, ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವುದು ಹಾಗೂ ಜ್ಞಾನದ ಜೊತೆಗೆ ಕೌಶಲ್ಯ ಅಭಿವೃದ್ಧಿ ಮತ್ತು ಶಿಸ್ತನ್ನು ತಿಳಿಸಿಕೊಡುವುದು ಎಂದರು. ಸತತ ಪರಿಶ್ರಮದಿಂದ ಗುರಿ ಹೊಂದಲು ಸಾಧ್ಯವಿದೆ. ವಿದ್ಯಾರ್ಥಿಗಳು ಪೋಷಕರ ಪರಿಶ್ರಮವನ್ನು ಗೌರವಿಸಿ ಸಮಯಪಾಲನೆ ಮತ್ತು ಜವಾಬ್ದಾರಿಯುತವಾಗಿ ವರ್ತಿಸಿದರೆ ಗುರಿ ತಲುಪಬಹುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ಜ್ಯೋತಿಶಂಕರ್ ಮಾತನಾಡಿ, ಗುರಿಯನ್ನು ಸಾಧಿಸುವವರೆಗೂ ವಿದ್ಯಾರ್ಥಿಗಳು ಜಾಗೃತರಾಗಿರಬೇಕು. ಜ್ಞಾನಕಿಂತ ದೊಡ್ಡದು ಯಾವುದು ಇಲ್ಲ . ಗುರುವನ್ನು ಗೌರವಿಸಬೇಕು, ಗುರುವನ್ನು ಗೌರವಿಸದ ವ್ಯಕ್ತಿ ಗೌರವಕ್ಕೆ ಅರ್ಹನಲ್ಲ ಎಂದರು. ಸ್ತ್ರೀ ಎಂಬ ಗುರುತಿಗಿಂತ ತನ್ನ ಅರ್ಹತೆಯ ಮೂಲಕ ಸಮಾಜದಲ್ಲಿ ಸ್ಥಾನವನ್ನು ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ವಿದ್ಯಾರ್ಥಿಗಳು ಬದುಕಿನ ಸತ್ಯದ ಸೂಕ್ಷ್ಮವನ್ನು ಅರಿತುಕೊಳ್ಳಬೇಕು. ಭಾರತೀಯ ಸಂಸ್ಕೃತಿಯ ಸಾಧಕರನ್ನು ತಿಳಿದುಕೊಂಡು, ಅವರ ಹಾದಿಯಲ್ಲಿ ಜೀವನವನ್ನು ರೂಪಿಸಿಕೊಳ್ಳಬೇಕು. ಮಹಿಳೆಯರಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಿದೆ ಎಂದರು. ಜೆಎಸ್ಎಸ್ ಸಂಸ್ಥೆಯು ಮಹಿಳಾ ಶಿಕ್ಷಣ ಮತ್ತು ಸಬಲೀಕರಣಕ್ಕೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಪ್ರಾಚಾರ್ಯ ಡಾ. ರೇಚಣ್ಣ, ದೀಕ್ಷಾರಂಭದ ಸಂಚಾಲಕ ಡಾ. ಡಿ. ಎಂ ಲೋಕೇಶ್ವರಿ, ಕು.ಧಾತ್ರಿ , ಕನ್ನಡ ವಿಭಾಗದ ಮುಖ್ಯಸ್ಥ, ಆರ್.ಎಸ್ ಕುಮಾರ್ , ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಚ್ ಎಸ್ ಸಿದ್ದ ಮಲ್ಲಿಕಾರ್ಜುನಸ್ವಾಮಿ , ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಜೆ ಪುಷ್ಪಲತಾ ಉಪಸ್ಥಿತರಿದ್ದರು.