
ಮೈಸೂರು : ಕನ್ನಡದ ಮೊಟ್ಟಮೊದಲ ಕೃತಿಯಾದ ‘ಕವಿರಾಜಮಾರ್ಗ’ದ ಕರ್ತÈ ಶ್ರೀವಿಜಯನ ಗೌರವಾರ್ಥ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರತಿವರ್ಷ ನೀಡಲಾಗುವ ರಾಜ್ಯ ಮಟ್ಟದ ಪ್ರತಿಷ್ಠಿತ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಯು ನಗರದ ಸಾಹಿತಿ ಟಿ. ಸತೀಶ್ ಜವರೇಗೌಡ ಅವರಿಗೆ ದೊರೆತಿದೆ.
ಕನ್ನಡ ಸಾಹಿತ್ಯ ಪರಿಷತ್ತು ತನ್ನ ಶತಮಾನೋತ್ಸವದ ನೆನಪಿಗಾಗಿ ತನ್ನ ಸಂಪನ್ಮೂಲಗಳಿAದ 20 ಲಕ್ಷ ರೂಪಾಯಿಗಳ ಸ್ಥಾಯಿನಿಧಿಯನ್ನು ಸ್ಥಾಪಿಸಿದ್ದು, ಅದರಿಂದ ಬರುವ ವಾರ್ಷಿಕ ಬಡ್ಡಿಯ ಮೊತ್ತದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಮೃದ್ಧ ಹಾಗೂ ಮೌಲಿಕವಾದ ಕೊಡುಗೆ ನೀಡಿದ 45 ವಯಸ್ಸಿನ ಮಿತಿಯೊಳಗಿರುವ ಇಬ್ಬರು ಸಾಹಿತಿಗಳಿಗೆ ಪ್ರತಿವರ್ಷ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಯನ್ನು ರಾಜ್ಯಮಟ್ಟದಲ್ಲಿ ನೀಡುತ್ತಾ ಬಂದಿದ್ದು, 2021 ನೆಯ ಸಾಲಿಗೆ ಮಂಡ್ಯ ಜಿಲ್ಲೆಯಿಂದ ಟಿ. ಸತೀಶ್ ಜವರೇಗೌಡ ಆಯ್ಕೆಯಾಗಿದ್ದಾರೆ. ಇವರೊಂದಿಗೆ ಮಂಗಳೂರಿನ ರವೀಂದ್ರ ನಾಯಕ್ ಸಣ್ಣಕ್ಕಿ ಬೆಟ್ಟು ಅವರುಗೂ ಸಹ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯು ತಲಾ 60,000 (ಅರವತ್ತು ಸಾವಿರ) ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ ಎಂದು ಕಸಾಪ ಆಡಳಿತಾಧಿಕಾರಿ ಡಾ. ಕೆ.ಎ. ದಯಾನಂದ ತಿಳಿಸಿದ್ದಾರೆ.
ಇತ್ತೀಚಿಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಆಡಳಿತಾಧಿಕಾರಿ ಡಾ.ಕೆ.ಎ. ದಯಾನಂದ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ. ಮನು ಬಳಿಗಾರ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಪ್ರೊ.ಆರ್. ಸುನಂದಮ್ಮ, ಖ್ಯಾತ ಸಾಹಿತಿಗಳಾದ ಡಾ.ಪಿ. ಚಂದ್ರಿಕಾ ಹಾಗೂ ಅಬ್ದುಲ್ ಹೈ. ತೋರಣಗಲ್ಲು ಆಯ್ಕೆ ಸಮಿತಿ ಟಿ. ಸತೀಶ್ ಜವರೇಗೌಡ ಅವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 2021 ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದೆ. ನವೆಂಬರ್ ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.