
ಪಿರಿಯಾಪಟ್ಟಣ : ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಭೂಮಾಫಿಯಾ ಇಂದು ಗ್ರಾಮಾಂತರ ಪ್ರದೇಶಗಳಿಗೂ ನುಗ್ಗಿದ್ದು ರೈತರ ಬದುಕು ಬೀದಿ ಪಾಲಾಗುತ್ತಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ರಾವಂದೂರು ಗ್ರಾಮದಲ್ಲಿ ಆರ್.ಪಿ .ಹೊನ್ನಪ್ಪ ಎಂಬುವರ ಕುಟುಂಬಕ್ಕೆ ಸೇರಿದ ಜಮೀನನ್ನು ಕುಟುಂಬದ ಆರ್.ಎಚ್. ಚೆನ್ನಬಸಪ್ಪ ಎಂಬುವರು ಇತರೆ ಸಹೋದರ ಸಹೋದರಿಯರಿಗೆ ತಿಳಿಸದೆ ತಮ್ಮ ಜಮೀನನ್ನು ಅಮೃತೇಶ್ ಎಂಬುವರಿಗೆ ಮಾರಾಟ ಮಾಡಲು ಯತ್ನಿಸಿ, ಅಗ್ರಿಮೆಂಟ್ ಮಾಡಿಕೊಟ್ಟಿರುತ್ತಾರೆ. ಈ ವಿಚಾರ ತಿಳಿದ ಕುಟುಂಬದ ಮತ್ತಿತರರು ಅವರ ಪಾಲಿಗಾಗಿ ಪಿರಿಯಾಪಟ್ಟಣದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುತ್ತಾರೆ . ಜಮೀನು ಪಿತ್ರಾರ್ಜಿತ ಆಸ್ತಿ ಎಂದು ತಿಳಿದ ಅಮೃತೇಶ್ ಎಲ್ಲರ ಸಹಿ ಇಲ್ಲದೆ ರಿಜಿಸ್ಟರ್ ಮಾಡಿಸಿಕೊಳ್ಳದೆ ನ್ಯಾಯಯುತವಾಗಿ ಮಾತ್ರ ನಾನು ಖರೀದಿಸುವ ಬೇಡಿಕೆ ಇಟ್ಟಿರುತ್ತಾರೆ.
ಈ ಸಂದರ್ಭದಲ್ಲಿ ಚೆನ್ನಬಸಪ್ಪ ಎಂಬುವರು ಮತ್ತೊಬ್ಬ ಬೆಂಗಳೂರಿನ ವಿನಯ್ ಎಂಬುವರಿಗೆ ಆಸ್ತಿಯನ್ನು ಮಾರಾಟ ಮಾಡಿ ರಿಜಿಸ್ಟರ್ ಮಾಡಿಸಿ ಕೊಟ್ಟಿರುತ್ತಾರೆ.
ಈ ವಿಚಾರವಾಗಿ ಅಮೃತೇಶ್ ಸಹ ನ್ಯಾಯಾಲಯದ ಮೆಟ್ಟಿಲೇರಿರುತ್ತಾರೆ.
ಇಷ್ಟೆಲ್ಲ ಘಟನೆಗಳು ನಡೆಯುತ್ತಿರುವಾಗಲೇ ವಿನಯ್ ಎಂಬ ವ್ಯಕ್ತಿಯು ಚನ್ನಬಸಪ್ಪನವರ ಮಗ ಕಿರಣ್ ಹಾಗೂ ವೀಣಾ ಎಂಬ ಮಹಿಳೆಯನ್ನು ಜಮೀನಿಗೆ ಕಳಿಸಿ ಜಮೀನಿನಲ್ಲಿ ಅಮೃತೇಶ್ ಮತ್ತಿತರರು ಬೆಳೆದಿದ್ದ ಜೋಳದ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿ ಗಲಾಟೆಗೆ ಪ್ರಚೋದನೆ ಮಾಡಿರುತ್ತಾರೆ.
ಅಲ್ಲದೆ ಮಹಿಳೆಯನ್ನು ಮುಂದೆ ಇಟ್ಟುಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅಮೃತೇಶ್ ಮತ್ತಿತರರ ಮೇಲೆ ಸುಳ್ಳು ಪ್ರಕರಣವನ್ನು ದಾಖಲಿಸುವ ಮೂಲಕ ಜಮೀನನ್ನು ತಮ್ಮ ವಶಕ್ಕೆ ಪಡೆಯಲು ಯತ್ನಿಸಿರುತ್ತಾರೆ.
ಪ್ರಕರಣ ದಾಖಲು : ವೀಣಾ ಎಂಬ ಮಹಿಳೆ ಅಮೃತೇಶ್ ಮತ್ತಿತರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದು ಅಮೃತೇಶ್ ರವರಿಂದ ಪ್ರತಿ ದೂರು ದಾಖಲಾಗಿದೆ.
ರೈತ ಸಂಘ ಖಂಡನೆ : ಈ ಘಟನೆಯ ಸಂಬಂಧ ಬೆಳೆ ಹಾಳು ಮಾಡಿರುವ ಹಾಗೂ ರೈತರ ಮೇಲೆ ದಬ್ಬಾಳಿಕೆ ಮಾಡಿರುವ ಲ್ಯಾಂಡ್ ಮಾಫಿಯಾಗಳ ಮತ್ತು ಅವರಿಗೆ ಕುಮಕ್ಕು ನೀಡುತ್ತಿರುವ ಸ್ಥಳೀಯ ಕಾಂಗ್ರೆಸ್ ಮುಖಂಡನ ವಿರುದ್ಧ ರೈತ ಸಂಘ ಖಂಡನೆ ವ್ಯಕ್ತಪಡಿಸಿದ್ದು ಇದು ಮುಂದುವರೆಯದಲ್ಲಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಮುಖಂಡನ ನೇತೃತ್ವ : ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವ ರೈತನ ಜಮೀನಿಗೆ ಚಿನ್ನದಂತ ಬೆಲೆ ಇದ್ದು, ಜಮೀನಿನ ಆಸುಪಾಸಿನಲ್ಲಿ ಲೇಔಟ್ ಗಳು ನಿರ್ಮಾಣವಾಗಿರುವ ಬಗ್ಗೆ ಅರಿತಿರುವ ಸ್ಥಳೀಯ ಕಾಂಗ್ರೆಸ್ ಮುಖಂಡ ಈ ಜಮೀನು ಪಿತ್ರಾರ್ಜಿತ ಆಸ್ತಿ ಎಂಬ ವಿಚಾರ ತಿಳಿದಿದ್ದರೂ ಸಹ ಆತನೇ ಮುಂದೆ ನಿಂತು ಈ ಇಬ್ಬರಿಗೆ ಮಾರಿಸುವ ಹಾಗೂ ಮಾರಿರುವ ಯತ್ನ ಮೇಲ್ನೋಟಕ್ಕೆ ತಿಳಿದುಬಂದಿದ್ದು ಅವರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತನ ಮೇಲೂ ಪ್ರಕರಣ ದಾಖಲು : ಬೆಳೆ ನಾಶಪಡಿಸಿರುವ ಹಾಗೂ ರೈತರ ಮೇಲೆ ಹಲ್ಲಿಗೆ ಮುಂದಾಗಿರುವ ಘಟನೆಗೆ ಸಂಬಂಧಿಸಿದಂತೆ ಸ್ಥಳದಲ್ಲಿ ಪ್ರಶ್ನಿಸಿದ ಪತ್ರಕರ್ತನ ಮೇಲೂ ಸಹ ಲ್ಯಾಂಡ್ ಮಾಫಿಯಾ ಸುಳ್ಳು ಪ್ರಕರಣ ದಾಖಲಿಸಿದ್ದು ಇದನ್ನು ಪತ್ರಕರ್ತರು ಸಹಾ ಖಂಡಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ದೇವರಾಜೇಗೌಡ, ಬೆಟ್ಟದ ತುಂಗಾ ಚಿಕ್ಕೇಗೌಡ, ಹರೀಶ್ ರಾಜೇ ಅರಸ್, ದಶರಥ, ನಂದಿಪುರ ಕರುಣಾನಿಧಿ, ಜಮೀನಿನ ವಾರಸುದಾರ ದೀಪು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.