
ಮೈಸೂರು ; ಜಿಪಿಎಸ್ ಸೇವಾ ಟ್ರಸ್ಟ್ ವತಿಯಿಂದ ನಗರದ ಕನಕಗಿರಿಯ ಸರ್ಕಾರಿ ಶಾರದಾ ವಿಲಾಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ೨೩೦ ವಿದ್ಯಾರ್ಥಿಗಳಿಗೆ ಸ್ಟೀಲ್ ಬಾಟಲಿಗಳನ್ನು ವಿತರಣೆ ಮಾಡಲಾಯಿತು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಟಲಿಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು, ಸಣ್ಣ ವಿಷಯವೂ ದೊಡ್ಡ ಬದಲಾವಣೆ ಉಂಟು ಮಾಡಬಲ್ಲದು ಎಂಬ ಮಾತಿದೆ. ಇದುವರೆಗೆ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ತರುತ್ತಿದ್ದ ವಿದ್ಯಾರ್ಥಿಗಳು, ನಾಳೆಯಿಂದ ಸ್ಟೀಲ್ ಬಾಟಲಿಯಲ್ಲಿ ನೀರು ತರಲಿದ್ದಾರೆ. ಇದು ಸಣ್ಣ ವಿಷಯವೇ ಆಗಿರಬಹುದು. ಆದರೆ ಮಕ್ಕಳ ದೇಹಕ್ಕೆ ಪ್ಲಾಸ್ಟಿಕ್ ಕಣಗಳು ಸೇರುವುದನ್ನು ತಪ್ಪಿಸುವ ಮೂಲಕ ಆರೋಗ್ಯ ಸುಧಾರಣೆಯ ದೊಡ್ಡ ಪರಿಣಾಮ ನಿರೀಕ್ಷಿಸಬಹುದು ಎಂದು ವಿಶ್ಲೇಷಿಸಿದರು.
ಇತ್ತೀಚೆಗೆ ಎಳೆಯ ವಯಸ್ಸಿನಲ್ಲೇ ಕ್ಯಾನ್ಸರ್, ಹೃದ್ರೋಗದಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಶಾಲೆಗೆ ಹೋಗಿದ್ದ ಮಗು ಸಾವು, ಕುಸಿದು ಬಿದ್ದು ಯುವಕ ಸಾವು ಎನ್ನುವ ಸುದ್ದಿಗಳನ್ನು ಓದಿದಾಗ ಆತಂಕ ಆಗುತ್ತದೆ. ನಮ್ಮ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದರಿಂದ ನಮ್ಮ ದೇಹಾರೋಗ್ಯ ಮತ್ತು ಪರಿಸರ ಎರಡಕ್ಕೂ ಹಾನಿ ತಪ್ಪಿಸಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
೧೬ನೇ ಶಾಲೆಯಲ್ಲಿ ವಿತರಣೆ: ಜಿಪಿಎಸ್ ಸೇವಾ ಟ್ರಸ್ಟ್ ಅಧ್ಯಕ್ಷ ಸಂದೇಶ್ ಮಾತನಾಡಿ, ಶಾಲಾ ಹಂತದಲ್ಲೇ ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಮಾಡುವ ಮಹತ್ವಾಕಾಂಕ್ಷೆಯೊAದಿಗೆ ಸ್ಟೀಲ್ ಬಾಟಲಿ ವಿತರಣೆ ಅಭಿಯಾನ ನಡೆಸುತ್ತಿದ್ದೇವೆ. ಇದುವರೆಗೆ ೧೬ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಟೀಲ್ ಬಾಟಲಿಗಳನ್ನು ನೀಡಿ ಪ್ಲಾಸ್ಟಿಕ್ನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಜೆಎಸ್ಎಸ್ ಆಸ್ಪತ್ರೆಯ ದಂತ ವೈದ್ಯ ಡಾ.ಶರತ್ ಒಡೆಯರ್ ಹಾಗೂ ಪೂಜಾ ದಂಪತಿ ವಿದ್ಯಾರ್ಥಿಗಳಿಗೆ ಪೆನ್ ಹಾಗೂ ಪೆನ್ಸಿಲ್ ಸೆಟ್ಗಳನ್ನು ವಿತರಣೆ ಮಾಡಿದರು. ಈ ವೇಳೆ ರೋಟರಿ ಕ್ಲಬ್ ಆಫ್ ವಿಜಯನಗರ ಕಾರ್ಯದರ್ಶಿ ಸೇತುರಾಮ್, ಎಸ್ಡಿಎಂಸಿ ಮಾಜಿ ಅಧ್ಯಕ್ಷ ಪುರುಷೊತ್ತಮ್, ಮುಖಂಡರಾದ ಶಿವಣ್ಣ, ವಿಷಕಂಠು, ನಾಗೇಶ್, ವಿದ್ಯಾ, ಸುಕೃತಿ ಪ್ರಭಾಕರ್ ಮುಂತಾದವರಿದ್ದರು.