
ಮೈಸೂರು: ಸಚಿವ ಸಂಪುಟ ಪುನಾರಚನೆ ವೇಳೆ ಕೊನೆ ಕ್ಷಣದಲ್ಲಿ ತಮ್ಮ ಹೆಸರು ಕೈಬಿಟ್ಟಿರುವುದಕ್ಕೆ ಮಾಜಿ ಸಚಿವ ಮಂಕಾಳ ವೈದ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಡೆಯ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗ್ಗೆ 10 ಗಂಟೆಗೆ ಸ್ವತಃ ಮುಖ್ಯಮಂತ್ರಿಗಳೇ ಕರೆ ಮಾಡಿ ಸಚಿವರ ಪಟ್ಟಿಯಲ್ಲಿ ನಿಮ್ಮ ಹೆಸರಿದೆ, ಪ್ರಮಾಣವಚನಕ್ಕೆ ಬನ್ನಿ ಎಂದು ಹೇಳಿದರು. ಆದರೆ ಬೆಳಗ್ಗೆ 11 ಗಂಟೆಗೆ ಮತ್ತೆ ಕರೆ ಮಾಡಿ ನಿಮ್ಮ ಹೆಸರು ಕೈಬಿಟ್ಟಿದ್ದೇವೆ, ಮಲ್ಲಣ್ಣಗೆ ಅವಕಾಶ ಕೊಟ್ಟಿದ್ದೇವೆ ಎಂದು ತಿಳಿಸಿದರು. ಆ ನಡುವೆ ಏನೇನು ನಡೆಯಿತು ಎಂಬುದು ನನಗೆ ಗೊತ್ತಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಯಾರಿಗೆ ಅನ್ಯಾಯವಾಯಿತು, ಯಾವ ಭಾಗಕ್ಕೆ ಅನ್ಯಾಯವಾಯಿತು ಎಂಬುದನ್ನು ನಾವು ಹೇಳಿದರೂ ಅದು ಮಾತಲ್ಲೇ ಉಳಿಯುತ್ತದೆ. ಜನರೇ ಅದನ್ನು ತೀರ್ಮಾನ ಮಾಡುತ್ತಾರೆ. ನನ್ನ ಅವಶ್ಯಕತೆ ಇರಲಿಲ್ಲವೇನೋ, ಅದಕ್ಕೆ ಕೊನೆ ಕ್ಷಣದಲ್ಲಿ ಕೈಬಿಟ್ಟಿದ್ದಾರೆ. ಆದರೆ ಇಂತಹದೇ ಉದ್ದೇಶಕ್ಕೆ ಕೈಬಿಟ್ಟಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಮಂತ್ರಿಯಾಗಿ ಮೂರು ವರ್ಷಗಳ ಕಾಲ ಒಳ್ಳೆಯ ಕೆಲಸ ಮಾಡಿದ್ದೇನೆ. ಯಾವುದೇ ಕೆಟ್ಟ ಹೆಸರು ತಂದುಕೊAಡಿಲ್ಲ, ನನಗೆ ಅಷ್ಟು ಸಾಕು ಎಂದು ಹೇಳಿದರು.