
ನಂಜನಗೂಡು: ಅಡಿಕೆ ತೋಟಗಳಲ್ಲಿ ಅಂತರ ಹಾಗೂ ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಿ ಎಂದು ಅರಸೀಕೆರೆಯ ಕೃಷಿ ಸಂಶೋಧನಾಕೇAದ್ರದ ಮುಖ್ಯಸ್ಥರು ಹಾಗೂ ತೋಟಗಾರಿಕಾ ವಿಜ್ಞಾನಿ ಡಾ ಭರತ್ಕುಮಾರ್ ರೈತರಿಗೆ ಸಲಹೆ ನೀಡಿದರು.
ಸೋಮವಾರ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿರುವ ಐಸಿಎಆರ್–ಜೆಎಸ್ಎಸ್ ಕೃಷಿ ವಿಜ್ಞಾನಕೇಂದ್ರದಲ್ಲಿ ಸುತ್ತೂರಿನಲ್ಲಿ ಎಸ್ಸಿಎಸ್ಪಿ ಯೋಜನೆಯಡಿಯಲ್ಲಿ “ಅಡಿಕೆಆಧಾರಿತ ಮಿಶ್ರ ಬೆಳೆ ಪದ್ಧತಿಗಳು” ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಅಡಿಕೆ ಬೆಳೆಯ ವೈಜ್ಞಾನಿಕ ಬೇಸಾಯ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಅಡಿಕೆಗೆ ಸೂಕ್ತವಾದ ಮಣ್ಣು ಮತ್ತು ಹವಾಮಾನ, ಸುಧಾರಿತ ತಳಿಗಳು, ಗುಣಮಟ್ಟದ ನರ್ಸರಿ ಸ್ಥಾಪನೆ, ತಾಯಿ ಮರಗಳ ಆಯ್ಕೆ, ಭೂಮಿ ಸಿದ್ಧತೆ, ಅಂತರ, ಗಿಡಗಳ ನಾಟಿ, ನೀರಾವರಿ ನಿರ್ವಹಣೆ, ಸಮಗ್ರ ಪೋಷಕಾಂಶ ನಿರ್ವಹಣೆ, ಸಮಗ್ರಕೀಟ ಹಾಗೂ ರೋಗಗಳ ನಿರ್ವಹಣೆ ಸೇರಿದಂತೆಉತ್ಪಾದನೆ ಹೆಚ್ಚಿಸುವ ವಿವಿಧತಾಂತ್ರಿಕ ಅಂಶಗಳನ್ನು ವಿವರಿಸಿದರು.
ಅಲ್ಲದೆ ಅಡಿಕೆ ತೋಟಗಳಲ್ಲಿ ಬಾಳೆ, ಪಪಾಯ, ನುಗ್ಗೆ, ಕಾಳು ಮೆಣಸು, ಏಲಕ್ಕಿ, ಕೋಕೋ, ಕಾಫಿ, ಜಾಯಿಕಾಯಿ, ಲವಂಗ, ಚಕ್ಕೆ ಸೇರಿದಂತೆ ವಿವಿಧಅಂತರ ಮತ್ತು ಮಿಶ್ರ ಬೆಳೆಗಳನ್ನು ಅಳವಡಿಸಿಕೊಳ್ಳುವುದರಿಂದ ಭೂಮಿಯ ಸಮರ್ಪಕ ಬಳಕೆ, ಹೆಚ್ಚುವರಿ ಆದಾಯ, ಅಪಾಯ ನಿರ್ವಹಣೆ ಹಾಗೂ ಸುಸ್ಥಿರ ಕೃಷಿ ವ್ಯವಸ್ಥೆಯನ್ನುರೂಪಿಸಬಹುದೆಂದು ವಿವರಿಸಿದರು. ವಿವಿಧ ಯಶಸ್ವಿ ಮಾದರಿಗಳನ್ನು ಉದಾಹರಣೆಯಾಗಿ ನೀಡುವ ಮೂಲಕ ರೈತರಲ್ಲಿ ಮಿಶ್ರ ಬೆಳೆ ಪದ್ಧತಿಯ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿ.ಟಿ.ಆರ್.ಐ. (ಕೇಂದ್ರತೋಟಗಾರಿಕಾ ಸಂಶೋಧನಾ ಸಂಸ್ಥೆ), ಮೈಸೂರಿನ ನಿವೃತ್ತ ಪ್ರಧಾನ ವಿಜ್ಞಾನಿ ಡಾ. ಮಹದೇವಸ್ವಾಮಿ ಮಾತನಾಡಿ, ಅಡಿಕೆಯು ರೈತರಿಗೆ ಉತ್ತಮ ಆದಾಯ ತಂದು ಕೊಡುವ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ನೀರಿನ ಲಭ್ಯತೆಯನ್ನು ಪರಿಗಣಿಸಿ ಯೋಜಿತವಾಗಿ ಬೆಳೆಯಬೇಕು ಎಂದು ತಿಳಿಸಿದರು. ಅಡಿಕೆ ತೋಟಗಳಲ್ಲಿ ಮಣ್ಣಿನ ತೇವಾಂಶವನ್ನು ಕಾಪಾಡಲು ಮಲ್ಚಿಂಗ್ ಅಳವಡಿಸಿಕೊಳ್ಳುವುದು, ಮಳೆನೀರು ಸಂಗ್ರಹಣೆ ಹಾಗೂ ನೀರಿನ ಸಮರ್ಪಕ ಬಳಕೆಗೆ ಆದ್ಯತೆ ನೀಡುವುದು ಅವಶ್ಯಕವಾಗಿದೆ ಎಂದು ಹೇಳಿದರು. ಅಡಿಕೆತೋಟದಲ್ಲಿ ಕೇವಲ ಏಕಬೆಳೆ ಪದ್ಧತಿಯನ್ನು ಅನುಸರಿಸದೆ, ಅಂತರ ಬೆಳೆ ಹಾಗೂ ಮಿಶ್ರ ಬೆಳೆಗಳನ್ನು ಅಳವಡಿಸಿಕೊಳ್ಳುವುದರಿಂದ ಹೆಚ್ಚುವರಿ ಆದಾಯದ ಜೊತೆಗೆ, ಭೂಮಿಯ ಫಲವತ್ತತೆ, ಜೈವಿಕ ವೈವಿಧ್ಯತೆ ಹಾಗೂ ತೋಟದ ಸುಸ್ಥಿರತೆ ಹೆಚ್ಚುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಐಸಿಎಆರ್–ಜೆಎಸ್ಎಸ್ಕೃಷಿ ವಿಜ್ಞಾನಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಜ್ಞಾನೇಶ್ ಬಿ.ಎನ್. ಮಾತನಾಡಿ, ತೋಟಗಾರಿಕಾ ಬೆಳೆಗಳಲ್ಲಿ ಅಡಿಕೆಯು ಅತ್ಯಂತ ಲಾಭದಾಯಕ ಬೆಳೆಯಾಗಿದ್ದರೂ, ಏಕಬೆಳೆ ಪದ್ಧತಿಯಿಂದ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ರೈತರು ಅಂತರ ಹಾಗೂ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಅರ್ಥಿಕ ನಷ್ಟವನ್ನು ಕಡಿಮೆ ಮಾಡಿಕೊಂಡು, ನಿರಂತರ ಆದಾಯವನ್ನು ಪಡೆಯಬಹುದು ಎಂದು ತಿಳಿಸಿದರು. ತೋಟಗಾರಿಕೆ ಬೆಳೆಗಳಲ್ಲಿ ನೀರಿನಅಂಶವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆದಕಾರಣ ಗಿಡಗಳಿಗೆ ಹೊದಿಕೆ (ಮಲ್ಚಿಂಗ್) ಮಾಡುವುದು ರೂಢಿಸಿಕೊಳ್ಳಬೇಕು. ಇದರಿಂದ ಗಿಡಗಳ ಸುತ್ತಾಮಣ್ಣಿನತೇವಾಂಶವನ್ನು ಸಂರಕ್ಷಿಸುವುದಲ್ಲದೇ, ಸೂರ್ಯನ ಬೆಳಕನ್ನು ತಡೆಯುವ ಮೂಲಕ ಕಳೆಗಳನ್ನು ನಿಗ್ರಹಿಸುತ್ತದೆ. ಮಲ್ಚಿಂಗ್ ನಿಂದ ಮಣ್ಣಿನ ತಾಪಮಾನವನ್ನು ನಿಯಂತ್ರಿಸುವುದಲ್ಲದೇ, ಸಾವಯವ ಪದಾರ್ಥಗಳು ಕೊಳೆಯುತ್ತಿದ್ದಂತೆ ಮಣ್ಣಿನ ಫಲವತ್ತತೆಯನ್ನು ಉತ್ಕೃಷ್ಟಗೊಳಿಸುತ್ತದೆ. ಹೆಚ್ಚಿನ ಮಾಹಿತಿಗಾಗಿರೈತರು ಕೃಷಿ ವಿಜ್ಞಾನಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನ ಹಾಗೂ ವೈಜ್ಞಾನಿಕ ಶಿಫಾರಸುಗಳನ್ನು ಅನುಸರಿಸಿ ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ಪ್ರಗತಿಪರ ರೈತರಾದ ಡಾ. ಚಂದ್ರಚೂಡ ಹಾಗೂ ಮೈಸೂರಿನ ನಿವೃತ್ತ ಪ್ರಾದೇಶಿಕ ಅರಣ್ಯ ಅಧಿಕಾರಿ ಹುಚ್ಚಯ್ಯ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ವಿನಯ್, ಡಾ. ಪ್ರಸಾದ್, ಡಾ. ದೀಪಕ್, ಡಾ. ರಕ್ಷಿತ್, ದಿವ್ಯಾ ಹಾಗೂ ಶಾಮರಾಜ್ ಉಪಸ್ಥಿತರಿದ್ದರು.