
ಮೈಸೂರು; ನಗರದ ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲ ಎಚ್ ಸತ್ಯಪ್ರಸಾದ್ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ದೇಶದ ರಕ್ಷಣೆಗಾಗಿ ಪ್ರಾಣತೆತ್ತ ಯೋಧರನ್ನು ನೆನೆಯುವುದು ಹಾಗೂ ಅವರ ಬಲಿದಾನ ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯ. ಈ ದಿನವು ನಮ್ಮ ದೇಶದ ಸಾರ್ವಭೌಮತ್ವವನ್ನು ಕಾಪಾಡಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ದೇಶದ ಸೈನಿಕರಿಗೆ ಗೌರವ ಸಲ್ಲಿಸುವ ದಿನವಾಗಿದೆ ಎಂದರು.
1999ರಲ್ಲಿ “ಆಪರೇಷನ್ ವಿಜಯ್” ಕಾರ್ಯಾಚರಣೆಯ ಮೂಲಕ ಅತÀ್ಯಂತ ಕಠಿಣ ಹವಾಮಾನ, ಹಿಮಾಚ್ಛಾದಿತ ಪರ್ವತಗಳು, ಶೂನ್ಯಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ ಭಾರತೀಯ ಯೋಧರು ತಮ್ಮ ಅಸಾಧಾರಣ ಪರಾಕ್ರಮವನ್ನು ಪ್ರದರ್ಶಿಸಿದರು. ಸುಮಾರು ಎರಡು ತಿಂಗಳು ನಡೆದ ಹೋರಾಟದಲ್ಲಿ 26 ಜುಲೈ 1999ರಂದು ಭಾರತೀಯ ಸೇನೆಯು ಕಾರ್ಗಿಲ್ ಪ್ರದೇಶದಲ್ಲಿದ್ದ ಎಲ್ಲಾ ಪ್ರಮುಖ ಶಿಖರಗಳನ್ನು ಮರಳಿ ವಶಪಡಿಸಿಕೊಂಡಿತು. ಈ ಯುದ್ಧದಲ್ಲಿ 527ಕ್ಕೂ ಭಾರತೀಯ ಯೋಧರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದರು. ಈ ಯೋಧರ ಬಲಿದಾನ, ಸಾಹಸ ಇಂದಿಗೂ ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ವಿದ್ಯಾರ್ಥಿಗಳು ಈ ದೇಶಭಕ್ತರಿಂದ ಪ್ರೇರಿತರಾಗಿ ದೇಶದ ಭದ್ರತೆಗಾಗಿ, ಐಕ್ಯತೆಗಾಗಿ ಕಟೀಬದ್ಧರಾಗಬೇಕೆಂದು ತಿಳಿಸಿದರು.
ಆಂಗ್ಲ ಉಪನ್ಯಾಸಕಿ ಮಯೂರಲಕ್ಷಿö್ಮ ಮಾತನಾಡಿ, ಕಾರ್ಗಿಲ್ ವಿಜಯ ದಿವಸವು ಕೇವಲ ಒಂದು ವಿಜಯೋತ್ಸವವಲ್ಲ, ಅದು ಭಾರತದ ಸೈನಿಕರ ಶೌರ್ಯ, ತ್ಯಾಗ ಮತ್ತು ದೇಶ ಪ್ರೇಮದ ಸಂಕೇತವಾಗಿದೆ. ಯೋಧರು ತಮ್ಮ ಜೀವವನ್ನೇ ಪಣಕ್ಕಿಟ್ಟು ದೇಶವನ್ನು ರಕ್ಷಿಸಿದ ಕಾರಣವೇ ನಾವು ಇಲ್ಲಿ ಸುರಕ್ಷಿತವಾಗಿ ಬದುಕಲು ಕಾರಣ. ಅವರ ತ್ಯಾಗವನ್ನು ಸ್ಮರಿಸಿ ದೇಶದ ಸಮಗ್ರತೆ ಮತ್ತು ಗೌರವವನ್ನು ಕಾಪಾಡುವ ಸಂಕಲ್ಪವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ, ಭಾರತೀಯರೂ ಮಾಡಬೇಕೆಂದು ಹೇಳಿದರು. ತನಿಷ್ಕಾ, ವೈಷ್ಣವಿ ಮತ್ತು ಹೇಮಂತ್ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು.