
ಮೈಸೂರು: ನೀರಿನ ಮಹತ್ವ ಹಾಗೂ ನೀರನ್ನು ಸಂರಕ್ಷಣೆ ಮಾಡಬೇಕಾಗಿರುವ ಮಹತ್ವದ ಸಂದೇಶವನ್ನು ಸಾರುವ ಯೋಗಾಸನಗಳನ್ನು ಮಾಡಿದ ಮೈಸೂರಿನ 37 ಯೋಗ ಪಟುಗಳು ‘ಆಸ್ಕರ್ ಬುಕ್ ಆಫ್ ರೆಕಾರ್ಡ್’ ಮಾಡಿದ್ದಾರೆ.
ಮೈಸೂರಿನ ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ನೀರಿನ ಸಂರಕ್ಷಣೆಯ ಸಂದೇಶದ ಮೂಲಕ ನೀರಿನ ಮಹತ್ವ ಸಾರುವ ವಿಶಿಷ್ಟ ಯೋಗದ ಮೂಲಕ ‘ಆಸ್ಕರ್ ಬುಕ್ ಆಫ್ ರೆಕಾರ್ಡ್’ ಗೌರವ ಪಡೆದಿದ್ದಾರೆ. ಯೋಗ ಶಿಸ್ತು ಮತ್ತು ಏಕಾಗ್ರತೆ ಸಮತೋಲನದ ಪ್ರದರ್ಶನದ ಮೂಲಕ ಈ ಸಾಧನೆ ಮಾಡಿರುವ ಯೋಗ ಪಟುಗಳು ‘ಆಸ್ಕರ್ ಬುಕ್ ಆಫ್ ರೆಕಾರ್ಡ್’ ನಿಂದ ಪ್ರಮಾಣ ಪತ್ರ, ಟ್ರೋಫಿ ಹಾಗೂ ಪದಕಗಳನ್ನು ಪಡೆದಿದ್ದಾರೆ.
ಈ ಕುರಿತು ತಂಡದ ನೇತೃತ್ವ ವಹಿಸಿದ್ದ ಯೋಗಚಾರ್ಯ ಡಾ.ಗಣೇಶ್ ಕುಮಾರ್ ಮಾತನಾಡಿ, ನೀರನ್ನು ಮಿತವಾಗಿ ಬಳಸಿ, ಭವಿಷ್ಯಕ್ಕಾಗಿ ನೀರನ್ನು ಸಚಿರಕ್ಷಿಸಿ ಎಂಬ ಸಂದೇಶವನ್ನು ಸಾರುವ ರೂಲ್ ನಂ. 6 ರ ಅಡಿ ವಾತಾಯನಾಸನ ಮೂಲಕ ಒಂದು ಲೋಟ ನೀರನ್ನು ತಲೆ ಮೇಲೆ ಇಟ್ಟುಕೊಂಡು 1 ನಿಮಿಷಗಳ ಕಾಲ 37 ಯೋಗ ಪಟುಗಳು ಈ ದಾಖಲೆ ಮಾಡಿದ್ದಾರೆ. ಇದರಲ್ಲಿ 7-64 ವರ್ಷ ವಯಸ್ಸಿನ ಎಲ್ಲ ಯುವಕರು ಭಾಗವಹಿಸಿದ್ದು, ಆಗಸ್ಟ್ 22 ರಂದು ಈ ದಾಖಲೆ ಮಾಡಲಾಗಿದೆ. ಈ ಆಸನದ ಮುಖ್ಯ ಉದ್ದೇಶ ನೀರನ್ನು ಮಿತವಾಗಿ ಬಳಸಿ ಅದರ ಮಹತ್ವ ಸಾರುವುದಾಗಿತ್ತು ಎಂದು ತಿಳಿಸಿದರು.
ಯೋಗ ಪಟುಗಳಾದ ಅಂಕಿತ, ಜಯಂತ್, ಸುರಭಿ ಹಾಗೂ 7 ವರ್ಷದ ತ್ರಿಷಿಕಾ ತಮ್ಮ ‘ಆಸ್ಕರ್ ಬುಕ್ ಆಫ್ ರೆಕಾರ್ಡ್’ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರು.